ನಂಜನಗೂಡು: ಬಿಜೆಪಿ ಸರ್ಕಾರ ಕಳೆದ ೫ ವರ್ಷದಲ್ಲಿ ಬಡವರಿಗೆ ಒಂದೇ ಒಂದು ಮನೆಯನ್ನು ಮಂಜೂರು ಮಾಡಿಲ್ಲ ಎಂದು ವರುಣಾ ಕ್ಷೇತ್ರದ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.
ವರುಣಾ ಕ್ಷೇತ್ರದ ಸರಗೂರು, ನಗರ್ಲೆ, ಬಸವನಪುರ, ಕಬ್ಬಲಗೆರೆಹುಂಡಿ, ಹನಿಯಂಬಳ್ಳಿ, ಗೋಣಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಎಲ್ಲಾ ಊರುಗಳಲ್ಲೂ ಬಡವರು ನಿವೇಶನವಿದೆ, ಮನೆ ಮಂಜೂರು ಮಾಡಿಕೊಡಿ ಎನ್ನುತ್ತಿದ್ದಾರೆ. ೨೦೧೩ ರಿಂದ ೨೦೧೮ರವರೆಗೆ ಇದ್ದ ಕಾಂಗ್ರೆಸ್ ಸರ್ಕಾರ ಮಂಜೂರು ಮಾಡಿದ್ದ ಮನೆಗಳ ಪಟ್ಟಿಯನ್ನು ಬಿಜೆಪಿ ಸರ್ಕಾರ ಲಾಕ್ ಮಾಡಿ ಒಂದು ಮನೆಯನ್ನು ಕೊಟ್ಟಿಲ್ಲ. ಇವರೆಲ್ಲಾ ಬಡವರ ವಿರೋಧಿಗಳು ಎಂದ ಅವರು ನಮ್ಮ ಸರ್ಕಾರದಲ್ಲಿ ಮತ್ತೆ ಮನೆಗಳನ್ನು ಮಂಜೂರು ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.
ಸರಗೂರಿನಲ್ಲಿ ಸಾರ್ವಜನಿಕರು ಮನವಿ ಸಲ್ಲಿಸಿ ಕುರಿಸಾಲ ಕೊಡಿಸಿ, ದಾರಿ ದುರಸ್ತಿ ಮಾಡಿಸಿ, ಸೈಟ್ ಕೊಡಿಸಿ, ಸ್ಮಶಾನ ಬೇಕು, ಕೊಟ್ಟಿಗೆ ಲೋನ್ ಕೊಡಿಸಿ, ಹಸು ಕೊಡಿಸಿ, ಕೆಲಸ ಕೊಡಿಸಿ, ಗೃಹಲಕ್ಷ್ಮಿ ಬಂದಿಲ್ಲ ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ಡಾ. ಯತೀಂದ್ರ ಪ್ರತಿಯೊಂದು ಊರಿನಲ್ಲೂ ಸಮಸ್ಯೆಗಳು ಹೆಚ್ಚಾಗಿದ್ದು ನಿಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್.ವಿಜಯ್, ಆಪ್ತ ಸಹಾಯಕರಾದ ಶಿವಸ್ವಾಮಿ, ಪ್ರದೀಪ್ ಕುಮಾರ್, ಇಒ ರಾಜೇಶ್ ಜೆರಾಲ್ಡ್, ಗ್ರಾ.ಪಂ ಅಧ್ಯಕ್ಷೆ ಮಹಾದೇವಮ್ಮ, ಉಪಾಧ್ಯಕ್ಷೆ ಸಂಧ್ಯಾರಾಣಿ, ಡಿಒಎಸ್ಪಿ ಗೋವಿಂದರಾಜು, ಎಸ್ ಐ ಸುನಿಲ್ ಮುಖಂಡರಾದ ರಂಗಸ್ವಾಮಿ, ಪ್ರಮೋದ್ ಕುಮಾರ್, ಮನು ನರಸಿಂಹಮೂರ್ತಿ, ಅಲ್ತಾಫ್ ಪಾಷಾ, ಉಬೇದುಲ್ಲಾ ಖಾನ್, ನಂದೀಶ್, ಶಿವಕುಮಾರ್, ನಾರಾಯಣ, ಗುರುಪಾದ ಸ್ವಾಮಿ, ಇಸ್ಮಾಯಿಲ್ ಮೂಗಶೆಟ್ಟಿ, ಸಿಡಿಪಿಒ ಮಂಜುಳಾ, ಪಿಡಿಒ ಈಶಕುಮಾರ್ ಹಾಜರಿದ್ದರು.