ಜಮ್ಮು: ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರ ಸಹೋದರ, ಬಿಜೆಪಿಯ ಹಿರಿಯ ನಾಯಕ ಮತ್ತು ನಗ್ರೋಟಾ ಶಾಸಕ ದೇವೇಂದ್ರ ಸಿಂಗ್ ರಾಣಾ ಅವರು ಹರಿಯಾಣದ ಫರಿದಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ರಾಣಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ತಮ್ಮ ಪತ್ನಿ, ಗುಂಜನ್ ರಾಣಾ, ಅವರ ಪುತ್ರಿಯರಾದ ದೇವಯಾನಿ ಮತ್ತು ಕೇತ್ಕಿ ಮತ್ತು ಪುತ್ರ ಅಧಿರಾಜ್ ಸಿಂಗ್ ಅವರನ್ನು ಅಗಲಿದ್ದಾರೆ.
ರಾಣಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜಮ್ಮುವಿನ ಗಾಂಧಿನಗರದಲ್ಲಿರುವ ಅವರ ನಿವಾಸದಲ್ಲಿ ರಾಜಕೀಯ ಮುಖಂಡರು ಸೇರಿದಂತೆ ನೂರಾರು ಮಂದಿ ಜಮಾಯಿಸಿದ್ದರು. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಕೂಡ ಅವರ ಮನೆಗೆ ಧಾವಿಸಿದರು. ಮೊದಲಿನಿಂದಲೂ ಬಹುಕೋಟಿ ವ್ಯವಹಾರವನ್ನು ಕಟ್ಟಿ ಬೆಳೆಸಿದ ರಾಣಾ, ವ್ಯಾಪಾರದಿಂದ ರಾಜಕೀಯದತ್ತ ಮುಖಮಾಡಿ ಜಮ್ಮುವಿನ ಡೋಗ್ರಾ ಸಮುದಾಯಕ್ಕೆ ಪ್ರಬಲ ಧ್ವನಿಯಾಗಿದ್ದರು.
ರಾಣಾ ಅವರು ಇತ್ತೀಚೆಗೆ ಜಮ್ಮು ಜಿಲ್ಲೆಯ ನಗ್ರೋಟಾ ವಿಭಾಗದಿಂದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಮರು ಆಯ್ಕೆಯಾದರು, ಎರಡನೇ ಅವಧಿಗೆ ಸ್ಥಾನವನ್ನು ಪಡೆದುಕೊಂಡರು. ರಾಣಾ ಅವರ ಹಠಾತ್ ನಿಧನಕ್ಕೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ದುಃಖ ವ್ಯಕ್ತಪಡಿಸಿದ್ದಾರೆ.