ಗದಗ: ಕಾಮಗಾರಿ ಗುತ್ತಿಗೆ ನೀಡಲು 5 ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪದ ಮೇಲೆ ಶಿರಹಟ್ಟಿಯ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಮತ್ತು ಇಬ್ಬರು ಆಪ್ತ ಸಹಾಯಕರನ್ನು ಲೋಕಾಯುಕ್ತ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಬಂಧಿಸಲಾಗಿದೆ.
ಶಾಸಕ ಚಂದ್ರು ಲಮಾಣಿಗೆ ಸೇರಿದ ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಬಾಲಾಜಿ ಆಸ್ಪತ್ರೆ ಮೇಲೆ ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ತಂಡ ಟ್ರಾಪ್ ಕಾರ್ಯಾಚರಣೆ ನಡೆಸಿದೆ.ಈ ವೇಳೆ ಶಾಸಕ ಚಂದ್ರು ಲಮಾಣಿ,ಅವರ ಸರ್ಕಾರಿ ಪಿಎ ಮಂಜುನಾಥ ವಾಲ್ಮೀಕಿ, ಹಾಗೂ ಖಾಸಗಿ ಪಿಎ ಗುರು ಲಮಾಣಿ ಬಲೆಗೆ ಬಿದ್ದಿದ್ದಾರೆ.
ರಸ್ತೆ ಬದಿ ತಡೆಗೋಡೆ ನಿರ್ಮಾಣ ಸಂಬಂಧ 1 ಕೋಟಿ ಮೊತ್ತದ ಕಾಮಗಾರಿಗೆ ಶಾಸಕರು ಕ್ಲಾಸ್-1 ಗುತ್ತಿಗೆದಾರ ವಿಜಯ ಪೂಜಾರ ಎನ್ನುವವರ ಬಳಿ 11 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ಇದರ ಮೊದಲ ಕಂತಿನ ಹಣವಾಗಿ 5 ಲಕ್ಷ ರೂ. ಪಡೆಯುವಾಗಲೇ ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡ ದಾಳಿ ನಡೆಸಿದೆ. ಶಾಸಕರು ಹಾಗು ಇಬ್ಬರು ಪಿಎಗಳನ್ನು ಲೋಕಾಯುಕ್ತ ಕಚೇರಿ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗುತ್ತಿದೆ.



