ಬೆಂಗಳೂರು: ಕರ್ನಾಟಕದ ನಾಲ್ಕು ರಾಜ್ಯಸಭೆ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿಗೆ ಅಡ್ಡಮತದಾನ ಹಾಕಿದ್ದು, ಇನ್ನೊಬ್ಬ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಮತದಾನಕ್ಕೆ ಆಗಮಿಸದೆ ಗೈರಾಗಿದ್ದಾರೆ. ಸದ್ಯ, ಈ ಇಬ್ಬರು ನಾಯಕರ ವಿರುದ್ಧ ಕ್ರಮಕ್ಕೆ ಮುಂದಾದ ರಾಜ್ಯ ಬಿಜೆಪಿ ನಾಯಕರು ನಾಳೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ಗೆ ದೂರು ನೀಡಲು ಮುಂದಾಗಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಎಸ್.ಟಿ.ಸೋಮಶೇಖರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕೋರಿ ಸ್ಪೀಕರ್ ಯುಟಿ ಖಾದರ್ಗೆ ದೂರು ನೀಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಹೀಗೆ ದೂರು ನೀಡಲು ಬಿಜೆಪಿಗೆ 15 ದಿನಗಳ ಕಾಲಾವಕಾಶವಿದೆ. ಒಂದು ವೇಳೆ ಕ್ರಮ ಕೈಗೊಳ್ಳಲು ವಿಳಂಬ ಮಾಡಿದರೆ ಕೋರ್ಟ್ ಮೊರೆ ಹೋಗಲು ಬಿಜೆಪಿ ನಾಯಕರು ಚಿಂತಿಸಿದ್ದಾರೆ.
ಹೈಕಮಾಂಡ್ಗೆ ಮಾಹಿತಿ ನೀಡಲಿರುವ ರಾಜ್ಯ ಬಿಜೆಪಿ
ಎಸ್ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರು ಬಿಜೆಪಿ ವಿಪ್ ಉಲ್ಲಂಘನೆ ಮಾಡಿದ ಕುರಿತು ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ಗೆ ಮಾಹಿತಿ ನೀಡಲು ಮುಂದಾಗಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಪ್ರತ್ಯೇಕ ಮಾಹಿತಿ ನೀಡಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಬ್ಯಾಲೆಟ್ ಪೇಪರ್ ಬದಲಾವಣೆಗೆ ಸೂಚಿಸಿದ ಬಿಜೆಪಿ ಏಜೆಂಟ್
ರಾಜ್ಯಸಭೆ ಚುನಾವಣೆಯಲ್ಲಿ ಯಶವಂತಪುರ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಅವರು ಕಾಂಗ್ರೆಸ್ ಅಭ್ಯರ್ಥಿ ಅಜಯ್ ಮಕೇನ್ ಅವರಿಗೆ ಮತ ಚಲಾಯಿಸಿದ್ದಾರೆ. ಬ್ಯಾಲೆಟ್ ಪೇಪರ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ಮಕೇನ್ಗೆ ಮತ ಹಾಕಿ ಬಿಜೆಪಿ ಅಧಿಕೃತ ಏಜೆಂಟ್ ಆಗಿದ್ದ ಶಾಸಕ ಅರವಿಂದ್ ಬೆಲ್ಲದ್ ಅವರಿಗೆ ತೋರಿಸಿದ್ದರು.
ಅಡ್ಡಮತದಾನವಾದ ಬಗ್ಗೆ ತಿಳಿದ ಬೆಲ್ಲದ್, ಬ್ಯಾಲೆಟ್ ರದ್ದುಗೊಳಿಸಿ ಇನ್ನೊಂದು ಬ್ಯಾಲೆಟ್ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದರು. ಆದರೆ ಇಲ್ಲ, ತೋರಿಸುತ್ತಿದ್ದೇನೆ ನೋಡಿ ಎಂದು ಸೋಮಶೇಖರ್ ಅವರು ಬಾಕ್ಸ್ಗೆ ಮತ ಪತ್ರ ಹಾಕಿದರು. ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರು ಮತ ಚಲಾಯಿಸಿದ್ದನ್ನು ಪಕ್ಷ ನೇಮಿಸಿದ ಅಧಿಕೃತ ಏಜೆಂಟರ್ಗಳಿಗೆ ತೋರಿಸುವ ನಿಯಮ ಇದೆ.