ಕೆ.ಆರ್.ನಗರ: ಕೆ.ಆರ್.ನಗರ ಭಾಗದ ತೆಂಗಿನ ಮರಗಳಲ್ಲಿ ಕಾಣಿಸಿಕೊಂಡಿರುವ ಕಪ್ಪು ತಲೆ ಹುಳುವಿನ ಕಾಟ ತಾಲೂಕಿನಲ್ಲಿ ಹರಡಿದರೇ ತೆಂಗಿನ ತೋಟ ಮಾಡಿಕೊಂಡು ಅದರಿಂದಲೇ ಬದುಕು ಕಟ್ಟಿಕೊಂಡಿರುವ ಕುಟುಂಬಗಳ ಬದುಕು ಮೂರಾಬಟ್ಟೆ ಆಗಲಿದೆ ಎಂದು ಡಿ.ಕೆ.ಕೊಪ್ಪಲು ಗೇಟ್ ತೆಂಗುಬೆಳೆಗಾರ ಡಿ.ಎನ್.ರವಿ ಅಮರ್ ಆತಂಕ ವ್ಯಕ್ತಪಡಿಸಿದ್ದಾರೆ.
ಕಪ್ಪು ತಲೆ ಹುಳುವಿನ ಕಾಟದಿಂದ ತೆಂಗು ಬೆಳೆಗಾರರು ಕಂಗಾಲಾಗಿದ್ದು, ಈಗಲಾದರು ತೋಟಗಾರಿಕೆ ಮತ್ತು ಕೃಷಿ ಇಲಾಖೆ ಶಾಶ್ವತವಾಗಿ ಈ ಹುಳುವಿನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ.
ಹುಳುಗಳ ದಾಳಿ ಹೇಗೆ..?
ಕೀಟವು ಎಲೆಯ ಗರಿಗಳ ಕೆಳಗಿನ ಭಾಗದಲ್ಲಿ ವಾಸಿಸುತ್ತದೆ. ಅಲ್ಲದೆ ಗರಿಗಳಲ್ಲಿ ಬಲೆಯನ್ನು ಹೆಣೆಯುತ್ತ ಹೋಗುತ್ತದೆ. ಜೊತೆಗೆ ಎಲೆಗಳ ಪತ್ರಹರಿತ್ತನ್ನು ತಿನ್ನುತ್ತದೆ. ಹೀಗೆ ಮಾಡುವುದರಿಂದ ಗರಿಗಳಲ್ಲಿ ಎರಡು ಬದಲಾವಣೆಗಳಾಗುತ್ತದೆ. ಅವುಗಳೆಂದರೆ ಎಲೆಗಳು ಬೆಳ್ಳಗಾಗುವುದು ಹಾಗೂ ಆ ಎಲೆಗಳ ಕೆಳಗಡೆ ಈ ಕೀಟದ ತ್ಯಾಜ್ಯವು ಸಂಗ್ರಹಗೊಳ್ಳುತ್ತವೆ ಅಲ್ಲದೇ ಈ ಹುಳ ಮೊದಲು ಮರದ ಕೆಳಗಿನ ಭಾಗದ ಗರಿಗಳಿಗೆ ಹಾನಿ ಮಾಡಲು ಪ್ರಾರಂಭಿಸುವುದರಿಂದ ಕೆಳಗಿನ ಭಾಗದ ಗರಿಗಳು ಒಣಗಿದ ತರಗಿನ ರೀತಿ ಕಾಣುತ್ತವೆ ಈ ಹುಳುವಿನ ದಾಳಿಗೊಳಗಾದ ತೆಂಗಿನ ಮರದ ಬೆಳವಣಿಗೆ ಕುಂಟುತ್ತವೆ ಅಲ್ಲದೇ ಕಾಯಿ ಇಳುವರಿ ಸಂಪೂರ್ಣವಾಗಿ ಕಡಿಮೆ ಅಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕಪ್ಪು ತಲೆ ಹುಳುವಿನ ಹಾವಳಿಯಿಂದ ನನ್ನ ನೂರಾರು ತೆಂಗಿನ ಮರಗಳು ಸಮರ್ಪಕವಾಗಿ ಇಳುವರಿ ಬರುತ್ತಿಲ್ಲ ತೆಂಗಿನ ಮರಗಳು ಇದ್ದರು ಪ್ರಯೋಜನಕ್ಕೆ ಬಾರದಂತೆ ಆಗಿದ್ದು, ಕೃಷಿ ಮತ್ತು ತೋಟಗಾರಿಕೆ ಇಲಾಖೆಯರಿಗೆ ಮಾಹಿತಿ ಕೊಟ್ಟರು ಯಾವುದೇ ಪ್ರಯೋಜನ ಅಗಿಲ್ಲ ಎಂದು ಎಂದಿದ್ದಾರೆ.