ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕಳಿಯ ದೇವಸ್ಥಾನಕ್ಕೆ ಇಂದು ಮುಂಜಾನೆ ಧನುಪೂಜೆಗೆ ಮನೆಯಿಂದ ಹೋಗಿದ್ದ ಬಾಲಕನೋರ್ವ ನಿಗೂಢವಾಗಿ ನಾಪತ್ತೆಯಾಗಿದ್ದು ಬಾಲಕನ ಮೃತದೇಹ ಮನೆಯ ಸಮೀಪದ ಕೆರೆಯಲ್ಲಿ ಪತ್ತೆಯಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಾಲಕನ ಅಸಹಜ ಸಾವಿನ ಬಗ್ಗೆ ಹಲವಾರು ಅನುಮಾನಗಳು ಮೂಡುತ್ತಿದ್ದು ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಕುವೆಟ್ಟು ಗ್ರಾಮದ ಸಂಬೋಳ್ಯ ಬರಮೇಲು ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ ಗೇರುಕಟ್ಟೆ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಮಂತ್, ನಾಪತ್ತೆಯಾಗಿ ಮೃತಪಟ್ಟ ಬಾಲಕ. ನಾಳ ದೇವಸ್ಥಾನಕ್ಕೆ ಸುಮಂತ್ ಸೇರಿದಂತೆ ಮೂರು ಮಂದಿ ಬಾಲಕರು ಒಟ್ಟಿಗೆ ಹೋಗುತ್ತಿದ್ದರು. ಇಂದು ಮುಂಜಾನೆ ಸುಮಂತ್ ಮನೆಯಿಂದ ಬರುವಾಗ ತಡವಾದ್ದರಿಂದ ಇಬ್ಬರು ಬಾಲಕರು ಆತನಿಗಾಗಿ ಕಾದು ದೇವಸ್ಥಾನಕ್ಕೆ ತೆರಳಿದ್ದರು. ಆದರೆ ಸುಮಂತ್ ಮನೆಯಿಂದ ಹೊರಟಿದ್ದ. ದೇವಸ್ಥಾನಕ್ಕೆ ಬಂದಿರಲಿಲ್ಲ. ಇದರಿಂದ ಸಂಶಯಗೊಂಡ ಬಾಲಕರು ಆತನ ಮನೆಗೆ ಪೋನ್ ಮಾಡಿದಾಗ ಸುಮಂತ್ನ ಮನೆಯವರು ಆತ ದೇವಸ್ಥಾನಕ್ಕೆ ಮುಂಜಾನೆಯೇ ಹೋಗಿದ್ದಾನೆ ಎಂದು ತಿಳಿಸಿದ್ದರು. ಆದರೆ ಆತ ದೇವಸ್ಥಾನಕ್ಕೆ ಬಂದಿಲ್ಲ ಎಂದು ಬಾಲಕರು ಹೇಳಿದಾಗ ಮನೆಯವರು ಆತಂಕಗೊಂಡು ಸ್ಥಳೀಯವಾಗಿ ಮಾಹಿತಿ ನೀಡಿದರು. ಬಾಲಕ ಬರುವ ದಾರಿಯ ನಡುವೆ ಕೆರೆ ಬಳಿ ರಕ್ತದ ಕಲೆಗಳು ಸ್ಥಳೀಯರಿಗೆ ಕಂಡು ಬಂದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯವರು, ಪೊಲೀಸ್ ಇಲಾಖೆ,ಅಗ್ನಿ ಶಾಮಕ ದಳ ಸ್ಥಳೀಯರು ಸೇರಿ ತೀರಾ ಹುಡುಕಾಟ ನಡೆಸಿದ ಬಳಿಕ ಬಾಲಕನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಇನ್ನು ಬಾಲಕನ ತಲೆಯ ಭಾಗಕ್ಕೆ ಗಂಭೀರವಾದ ಗಾಯವಾಗಿರೋದು ಗೊತ್ತಾಗಿದೆ.
ಶಾಲಾ ವಿದ್ಯಾರ್ಥಿ ಅಸಹಜವಾಗಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐ.ಜಿ.ಪಿ ಯವರು ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದರು. ಮೃತ ಬಾಲಕನ ಮನೆಯವರೊಂದಿಗೂ ಮಾತುಕತೆ ನಡೆಸಿದರು ಎಸ್ಪಿ ಡಾ.ಅರುಣ್ ಕೆ, ಡಿವೈಎಸ್ಪಿ ರೋಹಿನಿ ಸಿಕೆ , ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ, ಎಸ್ಐ ಆನಂದ್. ಎಂ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದರು.
ಆರಂಭದಲ್ಲಿ ಪ್ರಕರಣದ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿದ್ದರೂ ಪ್ರಾಥಮಿಕ ತನಿಖೆಯಲ್ಲಿ ಇದೊಂದು ಕೊಲೆ ಪ್ರಕರಣ ಎಂದು ಬಹುತೇಕ ಕಂಡು ಬರುತ್ತಿದ್ದು ಈ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳು ತೀವ್ರ ತನಿಖೆ ಆರಂಭಿಸಿದ್ದಾರೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.
ನಿಗೂಢವಾಗಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ
RELATED ARTICLES



