ಮೈಸೂರು: ಶಿಕ್ಷಕರು ಆಶ್ರಮ ಶಾಲೆಯ ಮಕ್ಕಳನ್ನು ಮಾನಸಿಕವಾಗಿ ದೈಹಿಕವಾಗಿ ಸದೃಢರನ್ನಾಗಿ ಮಾಡುವುದರ ಜೊತೆಗೆ ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಮೈಸೂರು ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕ ಡಾ. ಪುಷ್ಪವತಿ ಕರೆ ನೀಡಿದರು.
ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ವತಿಯಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ನಿಲಯ ಮೇಲ್ವಿಚಾರಕರು ಹಾಗೂ ಆಶ್ರಮ ಶಾಲೆಗಳ ಶಿಕ್ಷಕರುಗಳಿಗೆ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಮೇಲ್ವಿಚಾರಣೆ ಮಾಡುವ ವಿಧಾನಗಳು ಮತ್ತು ಮಾನಸಿಕ ಒತ್ತಡ ನಿರ್ವಹಣೆ ಕುರಿತ ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಸಂಸ್ಥೆಯ ಮೂಲ ಉದ್ದೇಶ ಸಮುದಾಯದತ್ತ ಹೋಗುವುದು ನಮ್ಮ ಗುರಿಯಾಗಿದೆ.
ಆ ಗುರಿಯನ್ನು ತಲುಪಿ ಆರೋಗ್ಯವಾಗಿರುವ ಮಕ್ಕಳು ದೇಶಕ್ಕೆ ಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹಾಡಿ ಮಕ್ಕಳ ಕಡೆ ಶಿಕ್ಷಕರು ಹೆಚ್ಚು ಗಮನ ಕೊಡುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ನಿಮ್ಮ ಮಕ್ಕಳಂತೆ ಕಾಣಬೇಕು. ಏಷ್ಯನ್ ಕ್ರೀಡೆಗಳಲ್ಲಿ ಟ್ರೈಬಲ್ ಮಕ್ಕಳು ಮುಂದೆ ಇರುತ್ತಾರೆ. ಅಂತಹ ಮಕ್ಕಳನ್ನು ಗುರುತಿಸಬೇಕು. ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದ್ದು, ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿರಿ ಎಂದ ಅವರು ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮವಾಗಿದ್ದು ನಮ್ಮ ಸಂಸ್ಥೆಯಿಂದಲೂ ಆಶ್ರಮ ಶಾಲೆ ಶಿಕ್ಷಕರಿಗೆ ಒಂದು ದಿನದಕಾರ್ಯಾಗಾರವನ್ನು ಮಾಡುತ್ತೇವೆ ಹಾಗೂ ಎಲ್ಲಾ ಸಹಕಾರವನ್ನು ನೀಡುತ್ತೇವೆ ಎಂದರು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಲ್. ಶ್ರೀನಿವಾಸ್ ಮಾತನಾಡಿ ನಮ್ಮ ಸಂಸ್ಥೆ ಈಗಾಗಲೇ ೧೧ ಆಶ್ರಮ ಶಾಲೆಗಳ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಿದ್ದೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದ ಆಶ್ರಮ ಶಾಲೆಗಳಲ್ಲಿಯೂ ಆರೋಗ್ಯ ತಪಾಸಣೆ ನಡೆಸುತ್ತೇವೆ. ಇದಕ್ಕೆ ಎಲ್ಲಾ ವೈದ್ಯರು ಆರೋಗ್ಯ ಸಂಸ್ಥೆಗಳು ಸಹಕಾರ ನೀಡಬೇಕು. ಆಶ್ರಮ ಶಾಲಾ ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳನ್ನು ಮಾಡಲು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ನಮ್ಮ ಎಲ್ಲಾ ತರಬೇತಿ ಕಾರ್ಯಕ್ರಮಗಳಿಗೂ ಶಿಕ್ಷಕರು ಭಾಗವಹಿಸಬೇಕು ಎಂದರು.
ಸಮಾರಂಭದಲ್ಲಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕ ಬಿ.ಎಸ್. ಪ್ರಭಾ ಅರಸ್, ಡಾ. ರವೀಶ್ಗಣಿ, ಡಾ. ಪ್ರಶಾಂತ್ ಎಸ್.ಎನ್., ಡಾ. ಸಂದೀಪ್, ಡಾ. ಮೋಹನ್ಕುಮಾರ್, ಡಾ. ಇಂದಿರಾ, ಎಂಡಿ ಡಾ. ಗಿರೀಶ್ ಎಂ.ಎಸ್., ತಾಲ್ಲೂಕು ಕಲ್ಯಾಣಾಧಿಕಾರಿಗಳಾದ ಬಸವರಾಜು, ನಾರಾಯಣಸ್ವಾಮಿ, ಅರುಣ್ಪ್ರಭು, ಅಶೋಕ್ ಹಾಜರಿದ್ದರು.