ಬೆಂಗಳೂರು : ಬಜೆಟ್ ಅಧಿವೇಶನ ಕಲಾಪವು ಮಾ.26ರ ವರೆಗೆ ನಡೆಸಿ, ಅನಂತರ ಅನಿರ್ದಿಷ್ಟಾವಧಿಗೆ ಮುಂದೂಡಲಾಗುವುದು ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಪ್ರಕಟಿಸಿದ್ದಾರೆ.
ಮಂಗಳವಾರ ಸದನ ಕಲಾಪ ಸಲಹಾ ಸಮಿತಿ ಸಭೆ(ಬಿಎಸ್ಸಿ)ಯಲ್ಲಿ ಚರ್ಚಿಸಿ ತೀರ್ಮಾನಿಸಿದ ನಿರ್ಣಯವನ್ನು ಪ್ರಕಟಿಸಿದ ಅವರು, ಆಯವ್ಯಯದ ಮೇಲಿನ ಸಾಮಾನ್ಯ ಚರ್ಚೆ ಹಾಗೂ ಅನುದಾನದ ಬೇಡಿಕೆಗಳ ಮೇಲಿನ ಚರ್ಚೆ ಮಾ.24ಕ್ಕೆ ಮುಕ್ತಾಯವಾಗಲಿದೆ. ಮಾ.25ರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚೆಗೆ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಅನಂತರ ಧನ ವಿನಿಯೋಗ ವಿಧೇಯಕವನ್ನು ಪರ್ಯಾಲೋಚನೆಗೆ ಪರಿಗಣಿಸಲಾಗುವುದು. ಮಾ.26ರಂದು ಅಧಿಕೃತ ಕಾರ್ಯ ಕಲಾಪಗಳು ಮುಗಿದ ನಂತರ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗುವುದು ಎಂದು ಅವರು ತಿಳಿಸಿದರು. ಮಾ.27ರ ವರೆಗೆ ಕಲಾಪ ನಿಗದಿಪಡಿಸಲಾಗಿತ್ತು.



