ಮೈಸೂರು/ಊಟಿ: ತಮಿಳುನಾಡಿನ ಊಟಿಯಲ್ಲಿ ಗುರುವಾರ ಸಂಭವಿಸಿದ ಕಾರು ಅಪಘಾತದಲ್ಲಿ ಮೈಸೂರಿನ ಬಿಜೆಪಿ ಮುಖಂಡರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿ ಮೈಸೂರು ನಗರದ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ ಎಂದು ಗುರುತಿಸಲಾಗಿದೆ.
ಬುಧವಾರದಂದು ಸ್ವಾಮಿಗೌಡ ಅವರು ತಮ್ಮ ಸ್ನೇಹಿತ ಜಗದೀಶ ಗೌಡ ಅವರ ಕುಟುಂಬ ಜೊತೆ ತಮಿಳುನಾಡಿನ ಊಟಿ ಪ್ರವಾಸಕ್ಕೆ ತೆರಳಿದ್ದರು. ಕಾರಿನಲ್ಲಿ ಸ್ವಾಮಿಗೌಡ, ಜಗದೀಶ್ ಗೌಡ, ಆತನ ಪತ್ನಿ ಮತ್ತು ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದರು. ಊಟಿ ಪ್ರವಾಸಕ್ಕೆ ಮುಗಿಸಿಕೊಂಡು ಮೈಸೂರಿಗೆ ತೆರಳುತ್ತಿದ್ದ ವೇಳೆ ಕೂಡ್ಲೂರು ಬಳಿ ಇವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಸ್ವಾಮಿಗೌಡ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆದರೆ ಜಗದೀಶ್ ಗೌಡ ಕುಟುಂಬದವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತ ನಡೆದ ಕೂಡಲೇ ಸ್ಥಳೀಯರು ಗಾಯಾಳುಗಳನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸುವ ಕಾರ್ಯ ಕೈಗೊಂಡಿದ್ದರು. ಬಳಿಕ ಈ ಸುದ್ದಿಯನ್ನು ಪೊಲೀಸರಿಗೆ ರವಾನಿಸಿದರು.
ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.