ಮಂಡ್ಯ: ಕಾರು-ಸ್ಕೂಟರ್ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರೂ ಶಿಕ್ಷಕಿಯರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಬಳಿ ನಡೆದಿದೆ.
ನಾಗರತ್ನ(48), ಹಾಗೂ ಮಂಜುಳಾ (45 ) ಮೃತಪಟ್ಟವರು.
ಬಸ್ತಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾಗಿ ನಾಗರತ್ನ ಹಾಗೂ ಪಿ.ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾಗಿ ಮಂಜುಳಾ ಕರ್ತವ್ಯ ನಿರ್ವಹಿಸುತ್ತಿದ್ದರು.

ಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯ ಕರ್ತವ್ಯಕ್ಕೆ ಮೃತ ಶಿಕ್ಷಕಿಯರು ಬಂದಿದ್ದರು. ಬಳಿಕ ಆಕ್ಟಿವ್ ಹೋಂಡಾ ಸ್ಕೂಟರ್ ನಲ್ಲಿ ಮೈಸೂರು ಕಡೆ ತೆರಳುತ್ತಿದ್ದರು. ಪಾಲಹಳ್ಳಿ ಕಡೆಯಿಂದ ಪಟ್ಟಣದ ಕಡೆ ಬರುತ್ತಿದ್ದ ಬ್ರೆಜ್ಜಾ ಕಾರು ಚಾಲಕ ಅಜಾಗರೂಕತೆಯಿಂದ ಕಾರು ಚಲಾಯಿಸಿದ ಪರಿಣಾಮ ಬೈಕ್ ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.
ಶಿಕ್ಷಕಿ ನಾಗರತ್ನ ಮೂಲತಃ ಕೆ.ಆರ್. ನಗರ ಬಸ್ತಿಪುರದಲ್ಲೇ ವಾಸವಾಗಿದ್ದರು. ಶಿಕ್ಷಕಿ ಮಂಜುಳಾ ಪಾಂಡವಪುರದ ಹಿರೀಮರಳಿ ಗ್ರಾಮದವರಾಗಿದ್ದು ಕುಟುಂಬದ ಜತೆ ಮೈಸೂರಿನ ಮೇಟಗಹಳ್ಳಿಯಲ್ಲಿ ವಾಸ ಮಾಡುತ್ತಿದ್ದರು.
ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಶ್ರೀರಂಗಪಟ್ಟಣ ಶವಗಾರಕ್ಕೆ ರವಾನಿಸಲಾಗಿದೆ. ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.