ರಾಯಚೂರು: ರಾಜ್ಯದಲ್ಲಿ ಕಾವೇರಿ ಬಿಕಟ್ಟು ವಿಚಾರ ಬಂದಾಗ ಅಂದು ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಚಿಟಿಕೆ ಹೊಡೆಯುವ ಸಮಯದಲ್ಲಿ ಉತ್ತರ ಕೊಟ್ಟಿದ್ದರು. ಆದರೆ ಈಗ ಕಾನೂನಿಗೆ ವಿರುದ್ಧವಾಗಿ ತೀರ್ಮಾನ ಮಾಡುವುದಕ್ಕೆ ಬರಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಂಗಾರಪ್ಪ ಅವರ ಮಗ. ಅವರ ಕಾಲದ ಕಾನೂನು ಬೇರೆ ಈಗ ಬೇರೆ. ಈಗ ಕಾನೂನು ಎತ್ಲಾಗಬೇಕು ಅತ್ಲಾಗ ಮೈ ಮೇಲೆ ಬಂದು ಬಿಡುತ್ತದೆ. ಸಿದ್ದರಾಮಯ್ಯ ಅವರು ಬಂಗಾರಪ್ಪ ತೆಗೆದುಕೊಂಡ ತೀರ್ಮಾನ ತೆಗೆದುಕೊಂಡರೆ ನಾವು ಅವರ ಜತೆ ಇರುತ್ತೇವೆ. ಅಂದು ಪ್ರಾಧಿಕಾರದ ವಿರುದ್ಧ ಹೋಗಿದ್ದಕ್ಕೆ ಹೈಕೋರ್ಟ್ನಲ್ಲಿ ನಮಗೆ ಛೀಮಾರಿ ಹಾಕಿದ್ದರು. ಆದರೆ ಅಷ್ಟರೊಳಗೆ ನಮ್ಮ ತಂದೆಯವರು ಏನೇನು ಮಾಡಬೇಕೋ ಮಾಡಿ ಮುಗಿಸಿದ್ದರು ಎಂದರು.
ತಮಿಳುನಾಡಿಗೆ ಪ್ರತಿ ದಿನ ೫ ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸೂಚಿಸಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿಯ ನಿರ್ಧಾರವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಕಳೆದ ಸೋಮವಾರ ಎತ್ತಿಹಿಡಿದಿದೆ. ಸೋಮವಾರ ನಡೆದ ಸಭೆಯಲ್ಲಿ ಸೆ.೧೩ ರಿಂದ ಅನ್ವಯವಾಗುವಂತೆ ಮುಂದಿನ ೧೫ ದಿನಗಳವರೆಗೆ ನಿತ್ಯ ೫ ಸಾವಿರ ಕ್ಯುಸೆಕ್ ನೀರನ್ನು ಕರ್ನಾಟಕ ತಮಿಳುನಾಡಿಗೆ ಹರಿಸಬೇಕು ಎಂದು ಆದೇಶಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಈ ಬಗ್ಗೆ ಮುಂದಿನ ಸಭೆಯನ್ನು ಸೆ. ೨೬ ಕ್ಕೆ ನಡೆಸಲಾಗುವುದು ಎಂದಿದೆ.
ನೈರುತ್ಯ ಮುಂಗಾರು ಕೊರತೆ ಉಂಟಾದಾಗಲೆಲ್ಲ ಕಾವೇರಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕರ್ನಾಟಕದ ನಡುವಿನ ದೀರ್ಘಕಾಲದ ವಿವಾದ ತಲೆ ಎತ್ತುತ್ತದೆ. ಉಭಯ ರಾಜ್ಯಗಳ (ಕರ್ನಾಟಕ ಮತ್ತು ತಮಿಳುನಾಡು) ನಡುವಿನ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಇಂದು, ನಿನ್ನೆಯದ್ದಲ್ಲ. ನೀರು ಹಂಚಿಕೆ ಸಂಬಂಧ ಅಂದಿನ ಮದ್ರಾಸ್ ಪ್ರೆಸಿಡೆನ್ಸಿ ಹಾಗೂ ಮೈಸೂರು ಸಂಸ್ಥಾನದ ಮಧ್ಯೆ ೧೮೯೨ರಲ್ಲಿ ಮತ್ತು ೧೯೨೪ರಲ್ಲಿ ಒಪ್ಪಂದ ಆಗಿತ್ತು. ಈ ಒಪ್ಪಂದದಂತೆ, ಮೈಸೂರು ಸಂಸ್ಥಾನದ ಜಲಾಶಯಗಳಲ್ಲಿ ಸಂಗ್ರಹಿಸಿದ ನೀರನ್ನು ತಮಿಳುನಾಡಿಗೆ ಬಿಡಬೇಕಿತ್ತು. ವಾಡಿಕೆಗಿಂತ ಹೆಚ್ಚು ಮಳೆಯಾದರೆ, ನೀರು ಬಿಡಲು ಅಡ್ಡಿಯಿರಲಿಲ್ಲ. ಆದರೆ ವಾಡಿಕೆಗಿಂತ ಕಡಿಮೆ ಮಳೆಯಾದಾಗ, ನೀರಿನ ಕೊರತೆ ಉಂಟಾದರೆ ಹಂಚಿಕೆ ಸಮಸ್ಯೆ ತಲೆದೋರುತ್ತಿತ್ತು. ಸ್ವಾತಂತ್ರ್ಯಾ ನಂತರವೂ ಈ ಸಮಸ್ಯೆ ಮುಂದುವರಿದಿದೆ ಎಂದು ಹೇಳಿದರು.