ಬೆಂಗಳೂರು: ಇವತ್ತು ಕಾವೇರಿ ನೀರಿನ ವಿಚಾರದಲ್ಲಿ ತೀರ್ಪು ಬಂದಿದೆ. ನೀರೇ ಇಲ್ಲದೇ ಇರುವ ಸಂದರ್ಭದಲ್ಲಿ ನಮ್ಮ ಅಹವಾಲು ಸರಿಯಾದ ರೀತಿ ಕೇಳಿದ್ದರೂ ನ್ಯಾಯಾಲಯವು ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲಿಸುವಂತೆ ಹೇಳಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡೆಡ್ ಸ್ಟೋರೇಜ್ ಹೊರತುಪಡಿಸಿ ಉಳಿಯುವ ೧೦ ಟಿಎಂಸಿ ನೀರಿನಲ್ಲಿ ನಾವು ನೀರು ಬಿಡುವುದು ಹೇಗೆ ಎಂದು ಪ್ರಶ್ನಿಸಿದರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೊಟ್ಟ ಸಲಹೆ ಏನಿದೆ? ಐದು ಸಾವಿರ ಕ್ಯೂಸೆಕ್ ನೀರು ಬಿಡುವ ವಿಚಾರ ಅದಕ್ಕೆ ಸಂಬಂಧಿಸಿದಂತೆ ದಾಖಲೆಯನ್ನು ಕೂಡ ವಕೀಲರು ಕೊಟ್ಟಿದ್ದಾರೆ. ನೀರು ಎಷ್ಟಿದೆ, ಏನು ಅನ್ನೋದನ್ನೂ ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ. ಎಲ್ಲಾ ಕಡೆ ಪ್ರತಿಭಟನೆ ಆಗುತ್ತಿದೆ. ಪ್ರತಿಭಟನೆ ಉಗ್ರ ರೂಪ ಪಡೆಯಬಾರದು ಅಷ್ಟೇ. ಮುಖ್ಯಮಂತ್ರಿ ಅವರು ನಗರಕ್ಕೆ ಬಂದ ಬಳಿಕ ಈ ಬಗ್ಗೆ ನಾವು ಚರ್ಚೆ ಮಾಡುತ್ತೇವೆ ಎಂದರು.
ಹೊಂದಾಣಿಕೆಗೋಸ್ಕರ ರಾಜ್ಯ ಬಲಿ ಕೊಡುತ್ತಿದ್ದಾರೆ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್, ಬಲಿ ಕೊಡುವುದಾದರೆ ನೀರು ಬಿಡುತ್ತಿರಲಿಲ್ಲ. ನಾವು ಒಳ ಒಪ್ಪಂದ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ರಾಜಕೀಯ ಕಾರಣಕ್ಕಾಗಿ ಅವರು ಹಾಗೆ ಮಾತನಾಡುತ್ತಿದ್ದಾರೆ. ನಾವು ಮೈತ್ರಿಕೂಟ ವಿಚಾರದಲ್ಲಿ ರಾಜ್ಯ ರಾಜಕೀಯ ಬೆರೆಸುವುದಿಲ್ಲ. ನಮಗೆ ಅದರ ಅವಶ್ಯಕತೆ ಇಲ್ಲ. ಸೋನಿಯಾ ಗಾಂಧಿ ಅವರು ಮೈತ್ರಿಕೂಟಕ್ಕೆ ಏನು ಹೇಳಲು ಸಾಧ್ಯ. ಈ ವಿಚಾರದಲ್ಲಿ ರಾಜಕೀಯ ಸಲ್ಲದು. ರಾಜಕೀಯ ಮಾಡುವುದಷ್ಟೇ ಎಲ್ಲದಕ್ಕೂ ಉತ್ತರವಲ್ಲ ಎಂದು ಬಿಜೆಪಿ ಟೀಕೆಗೆ ಪರಮೇಶ್ವರ್ ತಿರುಗೇಟು ಕೊಟ್ಟರು.