ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಸರಕಾರ ಕಾರ್ಯಕ್ರಮವಾಗಿ ಆಚರಣೆ ಮಾಡಿದರೆ ಸಾಲದು. ಪ್ರತಿಯೊಬ್ಬರಿಗೂ ಅಂಬೇಡ್ಕರ್ ಸಂವಿಧಾನವನ್ನು ಪರಿಚಯಿಸುವ ಕೆಲಸವಾಗಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಎರೆಮನುಗನಹಳ್ಳಿ ಗ್ರಾಮದಲ್ಲಿನ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ೧೩೩ನೇ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ವಿಶ್ವದ ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ನಮ್ಮ ಬೃಹತ್ ಪ್ರಜಾಪ್ರಭುತ್ವಕ್ಕೆ ಬಲಿಷ್ಠಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ಇದರಿಂದ ನಮ್ಮ ದೇಶ ಸುಭದ್ರವಾಗಿ ಉಳಿದಿದೆ ಎಂದರು.
ದೀನ ದಲಿತರು, ಶೋಷಿತರು, ಮಹಿಳೆಯರು, ಮಕ್ಕಳು, ಕಾರ್ಮಿಕರು ಸೇರಿ ಸಮಾಜದ ಕಟ್ಟಡ ಕಡೆಯ ವ್ಯಕ್ತಿಗೂ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ರಾಜಕೀಯ ಶಕ್ತಿಯನ್ನು ಕಲ್ಪಿಸಿಕೊಡುವ ಮೂಲಕ ಧ್ವನಿಯಿಲ್ಲದವರಿಗೆ ಧ್ವನಿ ತುಂಬಿದ್ದಾರೆ ಎಂದು ಹೇಳಿದರು.
ಬ್ರಿಟಿಷ್ ಸರಕಾರದಲ್ಲಿ ಕಾರ್ಮಿಕ ಮಂತ್ರಿಯಾಗಿ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪನೆ ಮಾಡಿ, ಕೆಲಸದ ಅವಧಿಯನ್ನು ೮ ಗಂಟೆಗೆ ನಿಗದಿಗೊಳಿಸಿದರು. ಅದಲ್ಲದೇ ಇಪಿಎಫ್, ಇಎಸ್ಐ, ವಾರದ ರಜೆ, ಹೆರಿಗೆ ರಜೆ ಮತ್ತು ಭತ್ಯೆಗಳು ದೊರೆಯುವಂತೆ ಹೋರಾಟ ನಡೆಸಿ, ಕಾಯಿದೆಗಳನ್ನು ಜಾರಿಗೆ ತಂದರು. ಅಂಬೇಡ್ಕರ್ ಅವರನ್ನು ಇಂದಿನ ಜನಸಮುದಾಯ ಒಂದು ಜಾತಿಗೆ ಸೀಮಿತಗೊಳಿಸುತ್ತಿರುವುದು ವಿಷಾದನೀಯ ಎಂದು ಹೇಳಿದರು.
ಅವರ ಹೋರಾಟ ಭಾರತದ ಎಲ್ಲ ಶೋಷಿತ, ದೀನ, ಶೂದ್ರ ವರ್ಗದ ಜನರ ಪರವಾಗಿತ್ತು. ಅಂದು ಕೇವಲ ಪದವಿ ಪಡೆದವರಿಗೆ ಆದಾಯ ತೆರಿಗೆ ಕಟ್ಟುವವರಿಗೆ, ಶ್ಯಾನುಬೋಗ ಮತ್ತು ಪಟೇಲರಿಗೆ ಮಾತ್ರ ಇದ್ದ ಮತದಾನ ಮಾಡುವ ಹಕ್ಕನ್ನು ಎಲ್ಲ ವಯಸ್ಕ ಭಾರತೀಯರಿಗೆ ಕಡ್ಡಾಯವಾಗಿ ಸಿಗುವಂತೆ ಮಾಡಿದ್ದು ಅಂಬೇಡ್ಕರ್ ಎಂದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಪುರುಷೋತ್ತಮ್, ತಾ.ಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವ ಸ್ವಾಮಿ, ಗ್ರಾ.ಪಂ ಮಾಜಿ ಸದಸ್ಯ ಅಸ್ಲಾಂ ಪಾಶ, ಕಾಂಗ್ರೆಸ್ ಮುಖಂಡರಾದ ದಮ್ಮನಹಳ್ಳಿ ಕೊಪ್ಪಲು ಪಾಲಕ್ಷ, ಅಶ್ವಥ್, ಹೊಸೂರು ಮಾದು, ಸತೀಶ್, ರಘು ಜಲೆಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ಧನು, ಪುನೀತ್ , ಗ್ರಾಮಸ್ಥರಾದ ಪಾಂಡು, ಸುನೀಲ್, ಹರೀಶ, ಸಂತೋಷ್, ಅನ್ನು, ಚಂದು, ವೇಣು, ರಮೇಶ್,ವೈ.ಕೆ.ಸುನೀಲ್,ಧರ್ಮರಾಜು, ಗ್ರಾ.ಪಂ ಸದಸ್ಯೆ ಗಿರಿಜಾಪ್ರಕಾಶ್, ಮಾಜಿ ಸದಸ್ಯ ಸಣ್ಣಸ್ವಾಮಿ, ಸೇರಿದಂತೆ ಸಂಘದ ಯುವಕರು ಮತ್ತಿತರು ಇದ್ದರು.