ಹೊಸೂರು : ವಿಶ್ವ ಕ್ಷೌರಿಕರ ದಿನಾಚರಣೆಯನ್ನು ಇಲ್ಲಿನ ಕೇಶಾಲಂಕಾರಿಗಳ ಸಂಘದ ವತಿಯಿಂದ ಡೋರ್ನಹಳ್ಳಿ ಗ್ರಾಮದ ಪಲ್ಲೋಟಿ ಶಾಂತಿಧಾಮ ವೃದ್ದಾಶ್ರಮದ ನಿರಾಶ್ರಿತರಿಗೆ ಕ್ಷೌರ ಮಾಡುವ ಮೂಲಕ ಆಚರಿಸಲಾಯಿತು. ಸಂಘದ ಎಲ್ಲಾ ಸದಸ್ಯರು ಹಾಜರಿದ್ದು ಆಶ್ರಮದಲ್ಲಿರುವ ೧೦೦ಕ್ಕೂ ಹೆಚ್ಚು ಮಂದಿಗೆ ಕ್ಷೌರ ಮಾಡಿದರು. ಇದರ ಜತೆಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಮಾತನಾಡಿ ಕೇಶಾಲಂಕಾರಿಗಳ ಸಂಘದ ಪದಾಧಿಕಾರಿಗಳು ಇಂತಹಾ ಸೇವಾ ಕಾರ್ಯ ಮಾಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಲ್ಲದೆ ಈ ರೀತಿಯ ಸಮಾಜ ಮುಖಿ ಕೆಲಸ ಮಾಡುವ ಸಂಘಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಸರ್ಕಾರ ಸವಿತಾ ಮಹರ್ಷಿ ಮತ್ತು ಹಡಪದ ಅಪ್ಪಣ್ಣ ಜಯಂತಿಗಳ ಆಚರಣೆ ಜಾರಿಗೆ ತಂದು ಸವಿತಾ ಸಮಾಜದವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡಿದೆ ಇದರ ಜತೆಗೆ ಸಮಾಜದ ಮುಖಂಡರಿಗೆ ಸರ್ಕಾರದಲ್ಲಿ ನಾಮನಿರ್ದೇಶನ ಮತ್ತು ಪಕ್ಷದಲ್ಲಿ ರಾಜಕೀಯ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.
ಸವಿತ ಸಮಾಜದವರು ಕೆ.ಆರ್.ನಗರ ಆಂಜನೇಯ ಬಡಾವಣೆಯಲ್ಲಿ ನಿರ್ಮಾಣ ಮಾಡುತ್ತಿರುವ ಸಮುದಾಯ ಭವನಕ್ಕೆ ಈ ಹಿಂದೆ ೫೦ ಲಕ್ಷ ರೂಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗಿತ್ತು. ಭವನದ ಉಳಿದ ಕಾಮಗಾರಿಗೆ ಪೂರ್ಣಗೊಂಡು ಲೋಕಾರ್ಪಣೆ ಮಾಡಲು ಬೇಕಾಗುವ ಅನುದಾನವನ್ನು ಶಾಸಕ ಡಿ.ರವಿಶಂಕರ್ರವರ ಗಮನಕ್ಕೆ ತಂದು ಮಂಜೂರು ಮಾಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಂಗಳವಾದ್ಯ ಕಲಾವಿದರ ತಾಲೂಕು ಸಂಘವನ್ನು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯರು ಉದ್ಘಾಟಿಸಿ ಪದಾಧಿಕಾರಿಗಳಿಗೆ ಶುಭಕೋರಿದರು, ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು. ಆಶ್ರಮದ ಧರ್ಮ ಗುರುಗಳಾದ ಚಾರ್ಲಿಸ್, ಅರುಣ್ರಾಯಪ್ಪ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎನ್.ಆರ್.ನಾಗೇಶ್, ಕೇಶಾಲಂಕಾರಿಗಳ ಸಂಘದ ಅಧ್ಯಕ್ಷ ಎಂ.ಎಸ್.ರಾಜೇಶ್, ಕಲಾವಿದರ ಸಂಘದ ಅಧ್ಯಕ್ಷ ಕೆ.ಪಿ.ನಾರಾಯಣ್ ಮಾತನಾಡಿದರು.
ಪದಾಧಿಕಾರಿಗಳಾದ ವಿನಯ್ಕುಮಾರ್, ಭಾಸ್ಕರ್, ಕುಮಾರ್, ಎ.ಹರೀಶ್ಕುಮಾರ್, ಅನಂತ, ವೆಂಕಟಚಲಯ್ಯ, ಬೇಲೂರಯ್ಯ, ಮಹದೇವ್, ಕುಚೇಲ, ಜೀವನ್, ಸ್ವಾಮಿ, ರಾಘವೇಂದ್ರ, ಪುನೀತ್ಗೊಂಬೆ, ರಾಚಯ್ಯ, ವೆಂಕಟೇಶ್, ಪ್ರಶಾಂತ್, ಲೋಲಾ, ರಾಜೇಶ್, ಸಿದ್ದರಾಜು, ಮಂಜುನಾಥ್, ದಿಲೀಪ್, ಕಾಂಗ್ರೆಸ್ ಮುಖಂಡರಾದ ಕೆ.ಪಿ.ಜಗದೀಶ್, ತಿಮ್ಮಶೆಟ್ಟಿ, ವ್ಯಾನ್ಸುರೇಶ್, ಎಂ.ಜೆ.ರಮೇಶ್, ರಾಮಶೆಟ್ಟಿ ಮುಂತಾದವರು ಹಾಜರಿದ್ದರು.