ಬೆಂಗಳೂರು: ದಕ್ಷಿಣ ಭಾರತಕ್ಕೆ ಕೇಂದ್ರದಿಂದ ಅನ್ಯಾಯವಾಗುತ್ತಿದೆ. ನಾವು ಭಿಕ್ಷೆಕೇಳುತ್ತಿಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಇದೇ ರೀತಿ ಅನ್ಯಾಯ ಮುಂದುವರಿದರೆ ದೇಶ ವಿಭಜನೆ ಕೂಗು ಮತ್ತೊಮ್ಮೆ ಏಳಬಹುದು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಮಾತನಾಡಿದ ಅವರು ರಾಜ್ಯವನ್ನು ತುಳಿಯಲು, ಆರ್ಥಿಕ ಬೆಳವಣಿಗೆ ಕುಗ್ಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಉತ್ತರ ಭಾರತ, ಗುಜರಾತ್ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಮ್ಮ ರಾಜ್ಯಕ್ಕೆ ಅರ್ಹತೆ ಇಲ್ವಾ ರಾಜ್ಯಕ್ಕೆ ಯೋಜನೆ ಆರ್ಥಿಕ ನೆರವು ಕೊಡುವುದು ಕೇಂದ್ರದ ಕರ್ತವ್ಯ. ಆದರೆ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದರು.
ಬಜೆಟ್ನಲ್ಲಿ ಏನು ಯೋಜನೆ ಕೊಟ್ಟಿದ್ದಾರೆ ವೋಟ್ ಕೇಳಿದ್ದು ಬಿಟ್ಟರೆ ಏನು ಕೊಟ್ಟಿದ್ದಾರೆ ನೀರಾವರಿ, ಉದ್ಯೋಗ ಸೃಷ್ಟಿ, ಬೆಂಗಳೂರು ಟ್ರಾಫಿಕ್ ಸಮಸ್ಯೆ ಯಾವುದು ಕೂಡ ಬಜೆಟ್ನಲ್ಲಿ ಪ್ರಸ್ತಾಪ ಆಗಿಲ್ಲ. ನಾವೇನು ಕೇಂದ್ರ ಸರ್ಕಾರದ ಜೊತೆ ಸಂಘರ್ಷ ಮಾಡುತ್ತಿಲ್ಲ. ನಮ್ಮ ಹಕ್ಕು ಮಾತ್ರ ಕೇಳುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಕೊಡಬೇಕಾದ ಗೌರವ ಮರೆತು ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಎಂದು ನಾನು ಹಿಂದೆಯೇ ಹೇಳಿದ್ದೆ ಈಗಲೂ ಹೇಳುತ್ತೇನೆ. ಇದೇ ರೀತಿ ಅನ್ಯಾಯ ಮುಂದುವರಿದರೆ ಮುಂದೆ ವಿಭಜನೆ ಕೂಗು ಏಳಬಹುದು. ತಮಿಳುನಾಡಿನಲ್ಲಿ ಈಗಾಗಲೇ ಶುರುವಾಗಿದೆ ಎಂದು ಹೇಳಿದರು.