ಬೆಂಗಳೂರು: ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ಅವರು ಶಾಸಕರಾಗಿದ್ದಾರೆ. ಆದ್ದರಿಂದ ಅವರಿಗೆ ಸಂಬಂಧಿಸಿ ಕ್ರಮ ತೆಗೆದುಕೊಳ್ಳುವ ಅಧಿಕಾರ ಕೇಂದ್ರೀಯ ಶಿಸ್ತು ಸಮಿತಿಗೆ ಮಾತ್ರ ಇದೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ತಿಳಿಸಿದ್ದಾರೆ.
ಈ ಹಿಂದಿನ ಬೆಳವಣಿಗೆ ಮತ್ತು ಅವರ ನಡವಳಿಕೆ ಕುರಿತು ಕೋರ್ ಕಮಿಟಿ ಶಿಫಾರಸು ಮಾಡಬಹುದು ಎಂದು ತಿಳಿಸಿದರು. ಉಳಿದ ನಿರ್ಣಯವನ್ನು ಅವರೇ ತೆಗೆದುಕೊಳ್ಳಬೇಕು. ಹಾಗಾಗಿ ಶಿಫಾರಸು ಮಾಡುವ ಕೆಲಸವನ್ನು ಕೋರ್ ಕಮಿಟಿ ಮಾಡಬಹುದು ಎಂದರು.
ಬಳ್ಳಾರಿಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯದಿಂದ ಆಗಿರುವ ಸಾವನ್ನು ಸರಕಾರಿ ಪ್ರಾಯೋಜಿತ ಕೊಲೆ ಎಂದೇ ಕರೆಯಬೇಕಾಗುತ್ತದೆ. ಆಸ್ಪತೆಗಳಲ್ಲಿ ಅಗತ್ಯ ಇರುವ ಔಷಧಿ ಸಿಗುತ್ತಿಲ್ಲ ಸರಬರಾಜೇ ಮಾಡುತ್ತಿಲ್ಲ. ಏನು ಕಾರಣ ಎಂದು ಪ್ರಶ್ನಿಸಿದರು.
ಗರ್ಭಿಣಿಯರು ಮತ್ತು ಹಸುಳೆಗಳ ಸರಣಿ ಸಾವು ಸಂಭವಿಸುತ್ತಿದೆ. ಇದು ಸಾಮಾನ್ಯ ಸಂಗತಿಯಲ್ಲ. ಈ ಸಾವಿಗೆ ನೈತಿಕ ಹೊಣೆಯನ್ನು ಆಡಳಿತ ನಡೆಸುವ ಸರಕಾರವೇ ಹೊತ್ತುಕೊಳ್ಳಬೇಕು. ಇಲಾಖೆ ಸಚಿವರೇ ನೈತಿಕ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು. ಬ್ಲ್ಯಾಕ್ ಲಿಸ್ಟಿನಲ್ಲಿ ಸೇರಿಸಿದ ಕಂಪೆನಿಯ ಔಷಧವನ್ನು ಮತ್ತೆ ಇಲ್ಲಿ ಸರಬರಾಜು ಮಾಡಿದ್ದು, ಇದರ ಹಿನ್ನೆಲೆ ಏನು ಎಂದು ಕೇಳಿದರು.
113 ಡ್ರಗ್ ಇನ್ಸ್ಪೆಕ್ಟರ್ಗಳಲ್ಲಿ ಈಗ ಕರ್ತವ್ಯದಲ್ಲಿ ಇರುವುದು 11 ಜನ ಮಾತ್ರ. 102 ಜನ ಇಲ್ಲ. ಈ ಎಲ್ಲ ಪ್ರಶ್ನೆಗಳನ್ನು ವಿಧಾನಸೌಧದಲ್ಲಿ ಎತ್ತುತ್ತೇವೆ ಎಂದು ತಿಳಿಸಿದರು.