ಮೈಸೂರು : ರಾಜ್ಯದ ತಂಬಾಕು ಮಾರುಕಟ್ಟೆಗಳಲ್ಲಿ ರೈತರಿಂದ ಹಿಂದಿನ ಸರಾಸರಿ ಅಥವಾ ಅದಕ್ಕಿಂತ ಹೆಚ್ಚು ಬೆಲೆಗೆ ಉತ್ಪನ್ನ ಖರೀದಿಸಬೇಕು. ತಂಬಾಕು ಮಂಡಳಿಯು ಹರಾಜು ಪ್ರಕ್ರಿಯೆ ಮೇಲೆ ನಿಗಾ ವಹಿಸಬೇಕು ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸೂಚಿಸಿದರು.
ಕೇಂದ್ರ ತಂಬಾಕು ಮಂಡಳಿಯು ಆಯೋಜಿಸಿದ್ದ ಜನಪ್ರತಿನಿಧಿಗಳು ಹಾಗೂ ಪ್ರಮುಖ ವರ್ತಕರೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಂಬಾಕು ಉತ್ಪನ್ನಗಳಿಗೆ ವಿಧಿಸಲಾಗುತ್ತಿರುವ ತೆರಿಗೆ ಕುರಿತು ದೂರುಗಳಿದ್ದಲ್ಲಿ ಅದನ್ನು ಲಿಖಿತ ರೂಪದಲ್ಲಿ ಸಲ್ಲಿಸಿದರೆ ಕೇಂದ್ರ ಹಣಕಾಸು ಸಚಿವರ ಗಮನಕ್ಕೆ ತಂದು ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಆದರೆ ತೆರಿಗೆಯ ನೆಪದಲ್ಲಿ ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.
ಇನ್ನೂ ಈ ಪ್ರದೇಶದಲ್ಲಿ ತಂಬಾಕು ರೈತರ ಹಿತಾಸಕ್ತಿಯನ್ನು ರಕ್ಷಿಸಲು ಕೇಂದ್ರವು ಬದ್ಧವಾಗಿದೆ ಎಂದರಲ್ಲದೆ, ರೈತರಿಗೆ ನೀಡಿದ ಹಿಂದಿನ ಭರವಸೆಗಳನ್ನು ಗೌರವಿಸುವಂತೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು.
ಮುಂದುವರೆದು, “ರೈತರನ್ನು ರಕ್ಷಿಸಬೇಕು. ಭರವಸೆ ನೀಡಿದಂತೆ, ನೆರೆಯ ಆಂಧ್ರಪ್ರದೇಶದಲ್ಲಿ ನೀಡಲಾಗುತ್ತಿರುವಂತೆಯೇ ನೀವು ಲಾಭದಾಯಕ ಬೆಲೆಯಲ್ಲಿ ತಂಬಾಕನ್ನು ಖರೀದಿಸಬೇಕು” ಎಂದರು. ಇದೇ ವೇಳೆ ಹರಾಜನ್ನು ನಿಲ್ಲಿಸುವ ಯಾವುದೇ ಏಕಪಕ್ಷೀಯ ಕ್ರಮದ ವಿರುದ್ಧವೂ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
“ತಂಬಾಕು ಮಂಡಳಿ ಅಥವಾ ಖರೀದಿದಾರರ ಬಗ್ಗೆ ಕರ್ನಾಟಕದ ರೈತರಲ್ಲಿ ಅಪನಂಬಿಕೆಯನ್ನು ಉಂಟುಮಾಡುವ ಕ್ರಮಗಳನ್ನು ತೆಗೆದುಕೊಳ್ಳಬೇಡಿ. ರೈತರು ವಿಶ್ವಾಸ ಕಳೆದುಕೊಂಡು ಪರ್ಯಾಯ ಬೆಳೆಗಳಿಗೆ ಬದಲಾಯಿಸಿದರೆ, ನೀವು ಏನು ಮಾಡುತ್ತೀರಿ? ಯಾವುದೇ ಸಂದರ್ಭದಲ್ಲೂ ಬೆಳೆಗಾರರ ಹಿತಾಸಕ್ತಿಗಳಿಗೆ ಹಾನಿಯಾಗಬಾರದು” ಎಂದು ಹೇಳಿದರು.



