ಮಂಗಳೂರು(ದಕ್ಷಿಣ ಕನ್ನಡ): ಕುಕ್ಕೆ ಸುಬ್ರಹ್ಮಣ್ಯನಿಗೆ ಚಂಪಾ ಷಷ್ಠಿ ವೈಭವ.. ಸುಬ್ರಹ್ಮಣ್ಯ ಆರೂಢನಾಗುವ ಪಂಚಮಿ ತೇರು, ಬ್ರಹ್ಮರಥ ನೋಡುವುದೇ ಮಹಾಭಾಗ್ಯ. ಹೌದು. ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸುಬ್ರಹ್ಮಣ್ಯ ಷಷ್ಟಿಯ ಭಕ್ತಿಪೂರ್ವಕವಾಗಿ ನಡೀತು..
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೊಪ್ಪರಿಗೆ ಏರುವ ಮೂಲಕ ಆರಂಭವಾದ ಚಂಪಾ ಷಷ್ಠಿಯ ಉತ್ಸವವು ಪಂಚಮಿ ರಥೋತ್ಸವ ಮತ್ತು ಮಹಾ ರಥೋತ್ಸವದೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಈ ಹಿಂದೆ ಸುಳ್ಯ ತಾಲೂಕಿಗೆ ಹಾಗೂ ಪ್ರಸ್ತುತ ನೂತನ ಕಡಬ ತಾಲೂಕಿಗೆ ಒಳಪಡುವ ಸುಬ್ರಹ್ಮಣ್ಯ ಎಂಬುದು ದಟ್ಟವಾದ ಕಾಡು,ಬೆಟ್ಟಗಳು ಸೇರಿದಂತೆ ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಪುಟ್ಟ ಊರು.
ಇಲ್ಲಿ ಇದೀಗ ಚಂಪಾ ಷಷ್ಠಿಯ ಸಂಭ್ರಮ.ಕೊಪ್ಪರಿಗೆ ಏರುವ ಮೂಲಕ ಆರಂಭವಾದ ಇಲ್ಲಿನ ಪ್ರಸಿದ್ಧ ಉತ್ಸವಗಳಲ್ಲಿ ಶೇಷವಾಹನಯುಕ್ತ ಬಂಡಿ ಉತ್ಸವ, ಹೂವಿನ ತೇರಿನ ಉತ್ಸವ,ಪಂಚಮಿ ತೇರು,ದೇವರ ಅಭವೃತೋತ್ಸವ,ಶ್ರೀ ದೇವರ ನೀರುಬಂಡಿ ಉತ್ಸವ,ಲಕ್ಷದಿಪೋತ್ಸವ ಸೇರಿದಂತೆ ಮಹಾ ರಥೋತ್ಸವದಿಂದ ಪ್ರಸಿದ್ಧಿ ಪಡೆದಿದೆ. ಕಾರ್ತಿಕ ಮಾಸದ ನಿರ್ಗಮನ, ಮಾರ್ಗಶಿರ ಮಾಸದ ಆಗಮನದಲ್ಲಿ ಚಂಪಾ ಷಷ್ಠಿಯ ಸೊಬಗು ಆರಂಭವಾಗುತ್ತದೆ. ಪವಿತ್ರ ಕುಮಾರಧಾರ ನದಿಯಲ್ಲಿ ಸ್ನಾನಮಾಡಿ, ಉರುಳುಸೇವೆ ಮೂಲಕ ಅಥವಾ ಭಕ್ತಿ ಭಾವದಿಂದ ದೇಗುಲ ಸುಬ್ರಹ್ಮಣ್ಯನಿಗೆ ನಮಿಸುವ ಭಕ್ತರು,ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸುತ್ತಾರೆ.

ಚಂಪಾ ಷಷ್ಠಿಯ ಹಿನ್ನೆಲೆಯಲ್ಲಿ ಶ್ರೀ ದೇವರು ನಿನ್ನೆ ಪಂಚಮಿ ತೇರಿನಲ್ಲಿ ಮತ್ತು ಇಂದು ಬ್ರಹ್ಮರಥದಲ್ಲಿ ರಥಾರೂಢನಾಗಿ ಲಕ್ಷಾಂತರ ಭಕ್ತರಿಗೆ ದರುಶನ ಭಾಗ್ಯ ನೀಡುತ್ತಾನೆ. ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥ ಸಾಗುತ್ತಿರಬೇಕಾದರೆ ಲಕ್ಷಾಂತರ ಮಂದಿ ಕಟ್ಟಡಗಳ ಮೇಲೇರಿ, ರಸ್ತೆಯ ಇಕ್ಕೆಲಗಳಲ್ಲಿ ನಿಂತು ಶ್ರೀ ಸುಬ್ರಹ್ಮಣ್ಯನ ದರ್ಶನ ಮಾಡುತ್ತಾರೆ. ರಥ ಸಾಗುತ್ತಿರುವಾಗ ತೇರಿಗೆ ಎಳ್ಳು,ಕರಿಮೆಣಸು, ನಾಣ್ಯಗಳನ್ನು ಎಸೆದು ಹರಕೆ ತೀರಿಸಿಕೊಳ್ಳುತ್ತಾರೆ.ಈ ಸಮಯದಲ್ಲಿ ಅರ್ಚಕರು ದೇವರಿಗೆ ಧರಿಸಿದ್ದ ಫಲ ಪುಷ್ಪಗಳನ್ನು ಭಕ್ತರತ್ತ ವೃಷ್ಟಿ ಮಾಡುತ್ತಾರೆ.ಇದನ್ನು ಮಹಾಭಾಗ್ಯವಾಗಿ ಮತ್ತು ಪ್ರಸಾದವಾಗಿ ಮನೆಗೆ ಭಕ್ತರು ಕೊಂಡೊಯ್ಯುತ್ತಾರೆ. ಕುಕ್ಕೆ ಸುಬ್ರಹ್ಮಣ್ಯದ ಈ ಬ್ರಹ್ಮರಥವನ್ನು ಬೆತ್ತದಿಂದ ಇಲ್ಲಿನ ಮೂಲನಿವಾಸಿಗಳು ಅಥವಾ ಮಲೆಕುಡಿಯ ವಂಶಜರು ಕಟ್ಟಲು ಪರಿಣಿತಿ ಪಡೆದಿರುತ್ತಾರೆ. ಅದೇ ರೀತಿ ಈ ಬ್ರಹ್ಮರಥವನ್ನು ಎಳೆಯುವುದು ಕೂಡ ಒಂದು ವಿಶೇಷತೆ ಆಗಿದೆ.ಚಂಪಾಷಷ್ಠಿಯ ಕೊನೆಯ ದಿನದಂದು ಕೊಪ್ಪರಿಗೆಯನ್ನು ಇಳಿಸುವ ಮೂಲಕ ವಾರ್ಷಿಕ ಜಾತ್ರೆಯು ತೆರೆ ಕಾಣುತ್ತದೆ.
ಈ ವರ್ಷದ ಜಾತ್ರಾ ಮಹೋತ್ಸವವು ಅತ್ಯಂತ ವ್ಯವಸ್ಥಿತವಾಗಿ ನೆರವೇರಿತು. ದೇವಸ್ಥಾನದ ಆಡಳಿತ ಮಂಡಳಿ,ದೇವಸ್ಥಾನದ ಸಿಬ್ಬಂದಿಗಳು,ಪೋಲಿಸ್, ಕಂದಾಯ,ಮೆಸ್ಕಾಂ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು,ಗೃಹರಕ್ಷಕ ದಳದ ಸಿಬ್ಬಂದಿಗಳು ಜಾತ್ರೋತ್ಸವ ಅಚ್ಚುಕಟ್ಟಾಗಿ ನಡೆಯಲು ವ್ಯವಸ್ಥೆಗಳನ್ನು ಕಲ್ಪಿಸಿದ್ದರು.
