ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳ ಪೈಕಿ ಒಂದಾದ ದಸರಾ ಫಲಪುಷ್ಪ ಪ್ರದರ್ಶನವನ್ನು ನಗರದ ಕುಪ್ಪಣ್ಣ ಪಾರ್ಕ್ನಲ್ಲಿ ಆಯೋಜಿಸಲಾಗಿದೆ. ಇಲ್ಲಿ ಸುಮಾರು ೨.೫ ಲಕ್ಷ ಹೂವುಗಳಿಂದ ತಯಾರಿಸಿದ ವಿವಿಧ ಆಕೃತಿಗಳು ಜನರನ್ನು ತಮ್ಮತ್ತ ಸೆಳೆಯುತ್ತಿವೆ. ಪ್ರಮುಖವಾಗಿ ಚಂದ್ರಯಾನ-೩, ಕ್ರಿಕೆಟ್ ವಿಶ್ವಕಪ್, ಚಾಮುಂಡಿ ದೇವಾಲಯ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ವಿವಿಧ ಆಕೃತಿಗಳು ಹೂವಿನಲ್ಲಿ ಮೈದಳೆದಿವೆ.

ಹೂಗಳಿಂದ ೨೪ ಅಡಿ ಎತ್ತರದ ರಾಕೆಟ್ ಲಾಂಚರ್, ವಿಕ್ರಂ ಲ್ಯಾಂಡರ್, ಪ್ರಗ್ಯಾನ್ ರೋವರ್ ಅನ್ನು ಹೂಗಳಿಂದಲೇ ನಿರ್ಮಿಸಲಾಗಿದೆ. ಭಾರತ ಆತಿಥ್ಯ ವಹಿಸಿರುವ ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತವನ್ನು ಬೆಂಬಲಿಸಲು ಹೂವುಗಳನ್ನು ಬಳಸಿ ಗೆದ್ದು ಬಾ ಇಂಡಿಯಾ ಎಂಬ ಕಲಾಕೃತಿ ರಚಿಸಲಾಗಿದೆ. ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಕಲಾಕೃತಿಗಳನ್ನೂ ಹೂವಿನಲ್ಲಿ ನಿರ್ಮಾಣ ಮಾಡಿರುವುದನ್ನು ಇಲ್ಲಿ ನೋಡಬಹುದು.