ಚಳ್ಳಕೆರೆ: ನಗರದ ನಗರಸಭೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಹಲವು ದಿನಗಳ ಸಾರ್ವಜನಿಕರ ಮಾತು ಇಂದು ನಿಜವಾಗಿದೆ. ನಗರಸಭೆಯಲ್ಲಿ ಯಾವುದೇ ಸಾರ್ವಜನಿಕರ ಖಾತೆ ಕಂದಾಯ ಕೆಲಸ ಕಾರ್ಯಗಳು ಆಗಬೇಕಾದರೆ ಲಂಚ ಕೊಡಬೇಕು ಎಂಬ ಮಾತು ಕೇಳಿ ಬರುತ್ತಲೇ ಇತ್ತು ಈ ಬಗ್ಗೆ ಶಾಸಕರ ಗಮನಕ್ಕೂ ಬಂದು ಈಗಾಗಲೇ ಹಲವು ಬಾರಿ ಸಮರ್ಥವಾಗಿ ಕೆಲಸ ನಿರ್ವಹಿಸುವಂತೆ ಮೌಖಿಕವಾಗಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ನಗರದ ಶ್ರೀ ಕಾಳಿಕಾಂಬ ಜುವೆಲರ್ಸ್ ಮಾಲೀಕ ನಾಗರಾಜ್ ರವರು ಖಾತೆ ಬದಲಾವಣೆಗಾಗಿ ಹಲವು ಬಾರಿ ನಗರಸಭೆಗೆ ಅಲೆದಾಡಿದರೂ ಪ್ರಯೋಜನವಾಗಿರಲಿಲ್ಲ ಕೆಲಸ ಮಾಡಿಕೊಡಲು ನಗರ ಸಭೆಯ ಪೌರಾಯುಕ್ತೆ ಲೀಲಾವತಿ ಹಾಗೂ ಬಿಲ್ ಕಲೆಕ್ಟರ್ ನಿಶಾನಿ ಕಾಂತರಾಜ್ ರವರು ಮೂರು ಲಕ್ಷ ಲಂಚದ ಬೇಡಿಕೆ ಇಟ್ಟು ಇಂದು ಬಿಲ್ ಕಲೆಕ್ಟರ್ ನಿಶಾನಿ ಕಾಂತರಾಜ್ ಮೂಲಕ ಎಲ್ಪಿ ಡಾಬಾದ ಬಳಿ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ.
ನಾಗರಾಜ್ ರವರು ಲೋಕಾಯುಕ್ತಕ್ಕೆ ದೂರು ನೀಡಿದಾಗ ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿಕೊಂಡು ಇಂದು ಬಲೆಗೆ ಕೆಡುವಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಲೋಕಾಯುಕ್ತ ಎಸ್ಪಿ ವಾಸುದೇವ ರಾವ್ ನಾಗರಾಜ್ ರವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು ಹಾಗಾಗಿ ಬೆಳಗ್ಗೆಯಿಂದ ನಮ್ಮ ತಂಡ ಕಾದು ಎಲ್ ಪಿ ಡಾಬದ ಬಳಿ ಬಿಲ್ ಕಲೆಕ್ಟರ್ ನಿಶಾನಿ ಕಾಂತರಾಜ್ ರವರನ್ನು ಲಂಚ ಸ್ವೀಕರಿಸುವ ವೇಳೆ ಬಂಧಿಸಲಾಗಿದೆ ಹಾಗೂ ಲೀಲಾವತಿಯವರ ದೂರವಾಣಿ ಸಂಭಾಷಣೆ ಹಾಗೂ ದಾಖಲೆಗಳ ಮೂಲಕ ವಶಕ್ಕೆ ಪಡೆಯಲಾಗಿದ್ದು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕ ವಲಯದ ಟೀಕೆ: ಲೋಕಾಯುಕ್ತ ದಾಳಿಯ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ನಗರಸಭೆ ಮುಂದೆ ಜಮಾಯಿಸಿ ನಗರಸಭೆಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಎಲ್ಲಾ ಅಧಿಕಾರಿಗಳು ಲಂಚಬಾಕರಾಗಿದ್ದು ಕೂಡಲೇ ಎಲ್ಲಾ ನಗರಸಭೆಯ ಅಧಿಕಾರಿಗಳನ್ನು ವರ್ಗಾವಣೆಗೊಳಿಸಬೇಕು ನಗರಸಭೆಯನ್ನು ಸಾರ್ವಜನಿಕ ಸ್ನೇಹಿ ಆಡಳಿತ ನಡೆಸುವಂತೆ ಆಗಬೇಕು ಎಂದು ಆಗ್ರಹಿಸಿದರು.