ರಾಮನಗರ: ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಇದೇ ಸೆ. ೨೧ರ ಶನಿವಾರ ರಾಮನಗರ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.
ಅವರು ನಾಳೆ ಸೆ. ೨೧ರ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಬೆಂಗಳೂರಿನಿಂದ ನಿರ್ಗಮಿಸಿ ರಸ್ತೆ ಮೂಲಕ ಬೆಳಿಗ್ಗೆ ೧೧ ಗಂಟೆಗೆ ಚನ್ನಪಟ್ಟಣಕ್ಕೆ ಆಗಮಿಸುವರು. ಬೆಳಿಗ್ಗೆ ೧೧.೧೫ಕ್ಕೆ ತಟ್ಟೆಕೆರೆ (ಕುಡಿಯುವ ನೀರಿನ ಕಟ್ಟೆ) ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ ಶಂಕು ಸ್ಥಾಪನೆ ಮಾಡುವರು. ಮಧ್ಯಾಹ್ನ ೧೨ ಗಂಟೆಗೆ ಪೆಟ್ಟಾ ಶಾಲೆಯ ಬಳಿ ಆಟದ ಮೈದಾನದ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸುವರು.
ಮಧ್ಯಾಹ್ನ ೧.೩೦ಕ್ಕೆ ದರ್ಗಾ ಅಖಿಲ್-ಷಾಹಿ ಬಡಾಮಖಾನ್ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಐಡಿಎಸ್ಎಸ್ಎಂಟಿ ಲೇಔಟ್ ನಿವೇಶನಗಳ ಹಂಚಿಕೆ ೩೦೦ ಫಲಾನುಭವಿಗಳ ಆಯ್ಕೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದಿಂದ ೨೫ ಫಲಾನುಭವಿಗಳಿಗೆ (ಆಟೋ ಮತ್ತು ಕಾರು) ಸಾರಥಿ ಯೋಜನೆಯಲ್ಲಿ ಸಹಾಯಧನ ಮಂಜೂರಾತಿ ಪತ್ರ ಹಂಚಿಕೆ, ಮಧ್ಯಾಹ್ನ ೧.೪೫ಕ್ಕೆ ಅಂಬೇಡ್ಕರ್ ನಗರದಲ್ಲಿ ಎಸ್ಎಫ್ಸಿ ವಿಶೇಷ ಅನುದಾನದಡಿಯಲ್ಲಿ ವಿವಿಧ ವಾರ್ಡ್ಗಳಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ. ಮಂಗಳವಾರಪೇಟೆ ಎಸ್ಎಫ್ಸಿ ವಿಶೇಷ ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ನೇರವೇರಿಸುವರು.
ಮಧ್ಯಾಹ್ನ ೨ ಗಂಟೆಗೆ ಶೆಟ್ಟಿಹಳ್ಳಿ ವಾರ್ಡ್ ನಂ. ೭, ಚರ್ಚ್ ರಸ್ತೆಯಲ್ಲಿ ಕೇಂದ್ರ ಪುರಸ್ಕೃತ ಅಮೃತ್ ಯೋಜನೆ-೨ರಡಿ ೩೫ ಕೋಟಿ ರೂ. ವೆಚ್ಚದ ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವರು. ಮಧ್ಯಾಹ್ನ ೨.೧೦ಕ್ಕೆ ಮದೀನ್ ಚೌಕ್ನಲ್ಲಿ ಅಲ್ಪಸಂಖ್ಯಾತರ ವಾರ್ಡ್ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಮಧ್ಯಾಹ್ನ ೩.೧೦ಕ್ಕೆ ೨೭ ಕೋಟಿ ರೂ. ವೆಚ್ಚದಲ್ಲಿ ನಗರಸಭೆಯ ನೂತನ ಕಟ್ಟಡ ನಿರ್ಮಾಣ ಹಾಗೂ ಇತರೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡುವರು.
ತದನಂತರ ಮಧ್ಯಾಹ್ನ ೩.೩೦ಕ್ಕೆ ಚನ್ನಪಟ್ಟಣ ಹಳೆ ತಾಲ್ಲೂಕು ಕಚೇರಿ ಮೈದಾನದ ವೇದಿಕೆ ಕಾರ್ಯಕ್ರಮದಲ್ಲಿ ಪಟ್ಲು ಗ್ರಾಮದ ನಗರ ನಿವಾಸಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ೫೦೦ ಫಲಾನುಭವಿಗಳ ಆಯ್ಕೆ, ಪಟ್ಲು ಗ್ರಾಮದ ಗ್ರಾಮೀಣ ನಿವಾಸಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ೨೦೦ ಫಲಾನುಭವಿಗಳ ಆಯ್ಕೆ, ವೈ.ಟಿ. ಹಳ್ಳಿ ಮತ್ತು ಕೂಡೂರು ಗ್ರಾಮ ಪಂಚಾಯಿತಿಯ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆ, ೨೩೦೦ ವಸತಿ ರಹಿತರಿಗೆ ಬಸವ ವಸತಿ ಯೋಜನೆ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ಮಂಜೂರಾತಿ ಪತ್ರ, ೨೧ ವಿಕಲಚೇತನ ಫಲಾನುಭವಿಗಳಿಗೆ ವಾಹನ ಮತ್ತು ಹೊಲಿಗೆ ಯಂತ್ರ ಹಾಗೂ ಇತರೆ ಸೌಲಭ್ಯಗಳನ್ನು ವಿತರಿಸುವರು.
ನಂತರ ಸಂಜೆ ೫.೩೦ಕ್ಕೆ ಚನ್ನಪಟ್ಟಣದಿಂದ ನಿರ್ಗಮಿಸಿ ಸಂಜೆ ೬.೩೦ಕ್ಕೆ ಬೆಂಗಳೂರು ತಲುಪುವರು ಎಂದು ಉಪ ಮುಖ್ಯಮಂತ್ರಿಯವರ ಹೆಚ್ಚುವರಿ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.