ಮದ್ದೂರು: ಬನ್ನಿ ಸಾರ್… ಬನ್ನಿ ಮೇಡಮ್… ಬರೀ 10 ರೂ… ಕೇವಲ 10 ರೂ… ಬಿಸಿ ಬಿಸಿ ಬಜ್ಜಿ, ಬಿಸಿ ಬೊಂಡ… ಚುರುಮುರಿ… ಖಾಲಿ ಆಗೋಯಿತು ಬೇಗ ಬೇಗ ಬನ್ನಿ ಸಾರ್, ಬನ್ನಿ ಮೇಡಮ್…
ತಾಲೂಕಿನ ಕೆಸ್ತೂರು ಗ್ರಾಮದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳು.

2 ನೇ ತರಗತಿಯಿಂದ 10 ನೇ ತರಗತಿಯ ನೂರಾರು ವಿದ್ಯಾರ್ಥಿಗಳು ಮಕ್ಕಳ ಸಂತೆಯಲ್ಲಿ ಸಡಗರ ಸಂಭ್ರಮದಿಂದ ಭಾಗವಹಿಸಿ. ಸ್ಥಳದಲ್ಲೇ ಬಗೆ ಬಗೆಯ ತಿಂಡಿಗಳನ್ನು ತಯಾರು ಮಾಡಿ ಪಾಲಕರಿಗೆ, ಸಾರ್ವಜನಿಕರಿಗೆ ಹಾಗೂ ಶಿಕ್ಷಕರಿಗೆ ಮಾರಾಟ ಮಾಡಿ ವ್ಯವಹಾರಿಕ ಜ್ಞಾನ ಪಡೆದುಕೊಂಡು ಸಂತೋಷ ಪಟ್ಟರು.
ಸಂಸ್ಥೆಯ ಕಾರ್ಯದರ್ಶಿ ಶೋಭಾನಾಗೇಗೌಡ ಮಾತನಾಡಿ, ನಮ್ಮ ಶಾಲೆಯಲ್ಲಿ ಪ್ರತಿವರ್ಷ ಮಕ್ಕಳ ಸಂತೆ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ವ್ಯಾಪಾರದಿಂದಾಗುವ ಲಾಭ, ನಷ್ಟವನ್ನು ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಉತ್ಸುಕತೆಯಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ಅರ್ಥ ಬರುವಂತೆ ಮಾಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಶಿಕ್ಷಕಿ ಶೈಲಜ, ಸಹ ಶಿಕ್ಷಕರಾದ ಅರ್ಪಿತ, ಶ್ರುತಿ, ಕಾವ್ಯಶ್ರೀ, ರಂಜಿತ, ಸಹನ, ಗಾಯಿತ್ರಿ, ಸುಮಲತಾ ಸೇರಿದಂತೆ ಇತರರು ಇದ್ದರು.
