Sunday, April 20, 2025
Google search engine

Homeರಾಜ್ಯನಗರ ವ್ಯಾಪ್ತಿಯ ಎಲ್ಲ ನೀರು ಸಂಗ್ರಹಾಗಾರಗಳ ಸ್ವಚ್ಛತೆ : ತಜ್ಞ ವೈದ್ಯರ ತಂಡ ಆಗಮನ

ನಗರ ವ್ಯಾಪ್ತಿಯ ಎಲ್ಲ ನೀರು ಸಂಗ್ರಹಾಗಾರಗಳ ಸ್ವಚ್ಛತೆ : ತಜ್ಞ ವೈದ್ಯರ ತಂಡ ಆಗಮನ

ಚಿತ್ರದುರ್ಗ: ಚಿತ್ರದುರ್ಗ ನಗರ ಸಮೀಪದ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಸಾರ್ವಜನಿಕರ ಮರಣ ಹಾಗೂ ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಧಿತ ಪ್ರದೇಶದಲ್ಲಿ ಜನರ ಮನೆ ಮನೆಗೆ ಆಹಾರ ಸಾಮಗ್ರಿಗಳ ಫುಡ್ ಕಿಟ್ ಅನ್ನು ವಿತರಿಸಲಾಗುತ್ತಿದ್ದು, ಅಸ್ವಸ್ಥರ ಆರೋಗ್ಯ ಮೇಲ್ವಿಚಾರಣೆ ಹಾಗೂ ಸಲಹೆ ಸೂಚನೆಗಾಗಿ ರಾಜ್ಯ ಮಟ್ಟದಿಂದ ತ್ವರಿತ ಸ್ಪಂದನಾ ತಂಡ (ರ್ಯಾಪಿಡ್ ರೆಸ್ಪಾನ್ಸ್ ಟೀಮ್) ಆಗಮಿಸಿದ್ದು, ಪ್ರಕರಣ ಉಲ್ಬಣಗೊಳ್ಳದಂತೆ ಶೀಘ್ರ ಸಂಪೂರ್ಣ ನಿಯಂತ್ರಣಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದ್ದಾರೆ.

ಕಲುಷಿತ ನೀರು ಸೇವನೆಯಿಂದ ಸಾರ್ವಜನಿಕರ ಮರಣ ಹಾಗೂ ಅಸ್ವಸ್ಥಗೊಂಡ ಕವಾಡಿಗರ ಹಟ್ಟಿ ಪ್ರದೇಶದಲ್ಲಿ ಜಿಲ್ಲಾಡಳಿತದ ವತಿಯಿಂದ ಮನೆ ಮನೆಗೆ ಆಹಾರ ಸಾಮಗ್ರಿಗಳ ಫುಡ್ ಕಿಟ್‍ಗಳನ್ನು ಈಗಾಗಲೆ ವಿತರಿಸಲಾಗಿದ್ದು, ಊಟ, ತಿಂಡಿಯನ್ನು ಕೂಡ ಪೂರೈಕೆ ಮಾಡಲಾಗುತ್ತಿದೆ. ಉಪವಿಭಾಗಾಧಿಕಾರಿ ಕಾರ್ತಿಕ್ ಹಾಗೂ ತಹಸಿಲ್ದಾರ್ ನಾಗವೇಣಿ ಅವರು ಸ್ಥಳದಲ್ಲಿಯೇ ಉಪಸ್ಥಿತರಿದ್ದು, ಫುಡ್ ಕಿಟ್ ವಿತರಣಾ ಕಾರ್ಯವನ್ನು ಸಮರ್ಪಕವಾಗಿ ಕೈಗೊಂಡಿದ್ದಾರೆ. ಅಸ್ವಸ್ಥರ ಆರೋಗ್ಯ ಮೇಲ್ವಿಚಾರಣೆ ಹಾಗೂ ನಿರ್ವಹಣೆಗಾಗಿ ಉನ್ನತ ಮಟ್ಟದ ವೈದ್ಯರ ತಂಡವನ್ನು ರಾಜ್ಯ ಮಟ್ಟದಿಂದ ಜಿಲ್ಲೆಗೆ ಕಳುಹಿಸಿಕೊಡುವಂತೆ ಜಿಲ್ಲಾಡಳಿತ ಆರೋಗ್ಯ ಇಲಾಖೆಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ, ಈಗಾಗಲೆ ಜಿಲ್ಲೆಗೆ ತಜ್ಞ ವೈದ್ಯರುಗಳನ್ನು ಒಳಗೊಂಡ ರ್ಯಾಪಿಡ್ ರೆಸ್ಪಾನ್ಸ್ ಟೀಮ್ ಜಿಲ್ಲೆಗೆ ಆಗಮಿಸಿದ್ದು, ಈಗಾಗಲೆ ತಂಡವು ಅಸ್ವಸ್ಥರ ಆರೋಗ್ಯ ಪರಿಸ್ಥಿತಿಯ ಮೇಲ್ವಿಚಾರಣೆ ಹಾಗೂ ಸಲಹೆ ಸೂಚನಾ ಕಾರ್ಯವನ್ನು ಪ್ರಾರಂಭಿಸಿದೆ. ಪ್ರಕರಣಗಳು ಉಲ್ಬಣಗೊಳ್ಳದಂತೆ ಪರಿಸ್ಥಿತಿಯನ್ನು ಶೀಘ್ರವಾಗಿ ಸಂಪೂರ್ಣ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಅಲ್ಲದೆ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಮೊತ್ತವನ್ನು ಕೂಡ ಸರ್ಕಾರದಿಂದ ಪಾವತಿಸಲು ಈಗಾಗಲೆ ಶಿಫಾರಸು ಸಲ್ಲಿಸಲಾಗಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಇಂತಹ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಲು, ನೀರು ಸಂಗ್ರಹಣಾ ಮೇಲ್ತೊಟ್ಟಿಗಳು, ನೆಲಮಟ್ಟದ ಜಲಸಂಗ್ರಹಾಗಾರಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಹಾಗೂ ಸಮರ್ಪಕವಾಗಿ ಕ್ಲೋರಿನೇಷನ್ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳು, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯತಿಗಳಿಗೆ ತಾಕೀತು ಮಾಡಲಾಗಿದೆ. ಈಗಾಗಲೆ ಚಿತ್ರದುರ್ಗ ನಗರ ವ್ಯಾಪ್ತಿಯ ಎಲ್ಲ 12 ಮೇಲ್ಮಟ್ಟದ ನೀರು ಸಂಗ್ರಹ ತೊಟ್ಟಿಗಳು ಹಾಗೂ 08 ನೆಲಮಟ್ಟದ ಜಲಸಂಗ್ರಹಾಗಾರಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ನಗರ ಪ್ರದೇಶ, ಸ್ಲಂ ಪ್ರದೇಶಗಳಲ್ಲಿ ಯಾವುದೇ ಬಗೆಯ ಸಾಂಕ್ರಾಮಿಕ ರೋಗಗಳು ಹರಡದಂತೆಯೂ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಈಗಾಗಲೆ ವೈದ್ಯರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿದ್ದು, ಸಮಿತಿಯು ಸ್ಥಳ ಪರಿಶೀಲನೆ ನಡೆಸಿ, ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

ಕರ್ತವ್ಯ ನಿರ್ಲಕ್ಷ್ಯಕ್ಕಾಗಿ ಚಿತ್ರದುರ್ಗ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಆರ್ ಗಿರಡ್ಡಿ ಹಾಗೂ ಕಿರಿಯ ಅಭಿಯಂತರ ಎಸ್.ಆರ್. ಕಿರಣ್ ಕುಮಾರ್ ಅವರನ್ನು ಅಮಾನತುಗೊಳಿಸಿ, ಇಲಾಖಾ ವಿಚಾರಣೆಗೆ ಆದೇಶ ಮಾಡುವಂತೆ ಸರ್ಕಾರಕ್ಕೆ ಮಾಡಲಾಗಿದ್ದ ಶಿಫಾರಸ್ಸಿಗೆ ಅನುಗುಣವಾಗಿ ಸರ್ಕಾರ ಈಗಾಗಲೆ ಈ ಇಬ್ಬರು ಇಂಜಿನಿಯರುಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಪರ್ಯಾಯವಾಗಿ, ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಹಿರಿಯೂರು ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಅಬಿಯಂತರ ರಾಜು ಕೆ. ಹಾಗೂ ಸಹಾಯಕ ಅಭಿಯಂತರ ಶ್ರೀರಂಗ ಎಂ.ಎಸ್. ಅವರನ್ನು ಚಿತ್ರದುರ್ಗ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸಲು ಪೂರ್ಣ ಪ್ರಮಾಣದಲ್ಲಿ ನಿಯೋಜಿಸಿ ಆದೇಶ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದ್ದಾರೆ.

ಕವಾಡಿಗರ ಹಟ್ಟಿ ಕಲುಷಿತ ನೀರು ಪೂರೈಕೆ ಪ್ರಕರಣದಲ್ಲಿ ಒಹೆಚ್‍ಟಿ ನೀರು ಸಂಗ್ರಹಗಾರದಿಂದ ಸಂಗ್ರಹಿಸಲಾದ ನೀರಿನ ಮಾದರಿಯ ಎಫ್‍ಎಸ್‍ಎಲ್ ಪರೀಕ್ಷಾ ವರದಿ ಬಂದಿದ್ದು, ನೀರಿನಲ್ಲಿ ಯಾವುದೇ ವಿಷಕಾರಿ ಅಂಶಗಳು ಕಂಡುಬಂದಿಲ್ಲ ಎಂಬುದಾಗಿ ವರದಿಯಲ್ಲಿದೆ. ಅಸ್ವಸ್ಥರು ಗುಣಮುಖರಾಗುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಅವರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular