ಚಾಮರಾಜನಗರ: ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ 154ನೇ ಜಯಂತಿ ಅಂಗವಾಗಿ ಏಕ್ ತಾರೀಕ್, ಏಕ್ ಘಂಟಾ, ಏಕ್ ದಿವಸ್ ಎಂಬ ಘೋಷವಾಕ್ಯದೊಂದಿಗೆ ಚಾಮರಾಜನಗರ ನಗರಸಭೆಯ ವತಿಯಿಂದ ನಗರದ ವಿವಿಧೆಡೆ ಸ್ವಚ್ಛತಾ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಚಾಮರಾಜನಗರ ಪಟ್ಟಣದ ವಿವಿಧೆಡೆ ನಗರಸಭೆಯ ವಿವಿಧ ಅಧಿಕಾರಿಗಳ ತಂಡಗಳು ಸ್ವಚ್ಛತಾ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರಮದಾನ ಮಾಡಿದರು. ನಗರಸಭೆ ಕಚೇರಿಯ ಮುಂಭಾಗ, ಪಟ್ಟಣದ ಪಾರಂಪರಿಕ ಜಯ ಚಾಮರಾಜ ಒಡೆಯರ್ ಅವರ ಜನನ ಮಂಟಪ, ಮಾರುಕಟ್ಟೆ, ಮಾರಿಗುಡಿ ದೇವಸ್ಥಾನ ಅವರಣ, ಎಲ್.ಐ.ಸಿ. ಬಳಿಯ ಅಟೋ ನಿಲ್ದಾಣ, ಶಕರಪುರ ಬಡಾವಣೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯ, ಎಸ್.ಬಿ.ಐ, ಇಂಡಿಯನ್ ಒವರಸೀಸ್ ಬ್ಯಾಂಕ್, ಜಿಲ್ಲಾ ಸಶಸ್ತ್ರ ಪಡೆಯ ವಸತಿ ಗೃಹ ಸೇರಿದಂತೆ ಇತರೆಡೆ ಸ್ವಚ್ಚತಾ ಕಾರ್ಯ ನಿರ್ವಹಿಸಿದರು.
ಇದೇ ವೇಳೆ ನಗರಸಭೆ ಆಯುಕ್ತ ರಾಮ್ದಾಸ್ ಅವರು ಮಾತನಾಡಿ ಸ್ವಚ್ಛತೆಗಾಗಿ ಸೇವೆ ಕಾರ್ಯಕ್ರಮವನ್ನು ಮಹಾತ್ಮ ಗಾಂಧಿಜೀ ಅವರ ಜಯಂತಿ ಅಂಗವಾಗಿ ಸರ್ಕಾರದ ನಿರ್ದೇಶನದಂತೆ ನಗರದ ಎಲ್ಲಾ ಮುಖ್ಯ ರಸ್ತೆಗಳು, ರೈಲ್ವೆ ನಿಲ್ದಾಣ, ಪಾರಂಪರಿಕ ಸ್ಥಳ, ದೇವಸ್ಥಾನಗಳನ್ನು ಸ್ವಚ್ಛಗೊಳಿಸುವುದೇ ಅಗಿದೆ. ನಗರದ 31 ವಾರ್ಡ್ಗಳಲ್ಲಿಯೂ ಆಯಾ ವಾರ್ಡ್ ಸದಸ್ಯರ ನೇತೃತ್ವದಲ್ಲಿ ಸಾರ್ವಜನಿಕ ಸ್ಥಳಗಳ ಶುಚಿಗೊಳಿಸುವುದು ಉದ್ದೇಶ ಇದಾಗಿದೆ ಎಂದರು.
ನಗರಸಭಾ ಸದಸ್ಯರಾದ ಕುಮುದಾ ಕೇಶವ ಮೂರ್ತಿ, ಚಿನ್ನಮ್ಮ, ಮಹೇಶ್, ನೀಲಮ್ಮ, ಪರಿಸರ ಪ್ರೇಮಿ ಈಶ್ವರಿ ಸೋಷಿಯಲ್ ಟ್ರಸ್ಟ್ನ ವೆಂಕಟೇಶ್, ನಗರಸಭೆಯ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗಿರಿಜಮ್ಮ, ಹಿರಿಯ ಆರೋಗ್ಯ ನಿರೀಕ್ಷಕಿ ಸುಶ್ಮಾ, ಮಂಜುನಾಥ್, ಕಿರಿಯ ಆರೋಗ್ಯ ನಿರಿಕ್ಷಕಿ ಪುಷ್ಪಾ, ಕಿರಿಯ ಇಂಜಿನಿಯರ್ ಆರಾಧ್ಯ, ಹಾಗೂ ನಗರಸಭೆಯ ಸಿಬ್ಬಂದಿ ಸ್ವಚ್ಛತಾ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದರು.
ಸ್ವಚ್ಛತಾ ಕಾರ್ಯದಲ್ಲಿ ಬ್ಯಾಂಕಿನ ಅಧಿಕಾರಿಗಳು ಜಿಲ್ಲಾ ಸಶಸ್ತ್ರ ಪಡೆಯ ವಸತಿ ಗೃಹದ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಕೈಜೋಡಿಸಿದರು.
