ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 35,000 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಜೊತೆಗೆ ಇಲಾಖೆಯ 532 ಪೌರ ಕಾರ್ಮಿಕರ ಹುದ್ದೆಗಳನ್ನು ಕಾಯಂ ಮಾಡಲಾಗುವುದು ಎಂದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ವಜ್ರಮಹೋತ್ಸವ ಉದ್ಘಾಟಿಸಿ, ‘ವಜ್ರಜ್ಯೋತಿ’ ಸ್ಮರಣ ಸಂಚಿಕೆಯನ್ನು ಲೋಕಾರ್ಪಣೆ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
“ನಮ್ಮದು ನುಡಿದಂತೆ ನಡೆಯುವ ಸರ್ಕಾರ. ನೌಕರರ ಬೇಡಿಕೆಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳುತ್ತೇವೆ. NPS ಜಾರಿಗೆ ಕೇಂದ್ರ ಸರ್ಕಾರ ಜವಾಬ್ದಾರಿಯಾಗಿದೆ. ಆದರೆ ನಾವು ಪ್ರಣಾಳಿಕೆಯಲ್ಲಿ OPS ಜಾರಿ ಮಾಡುವುದಾಗಿ ವಾಗ್ದಾನಿಸಿದ್ದೇವೆ. ಈ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ,” ಎಂದರು.
1902ರಲ್ಲಿ ಕರ್ನಾಟಕದಲ್ಲಿಯೇ ಏಷ್ಯಾದಲ್ಲಿ ಮೊದಲ ವಿದ್ಯುತ್ ಉತ್ಪಾದನೆಯಾಗಿದೆ. ಈಗ ನಾವು 34,000 ಮೆಘಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದೇವೆ. “ಈಗ ನಮ್ಮ ಗುರಿ 60,000 ಮೆಘಾವ್ಯಾಟ್. ಆಗ ರೈತರಿಗೂ, ಪಂಪ್ ಸೆಟ್ಗಳಿಗೆ ಹಗಲು 7 ಗಂಟೆಗಳ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತದೆ,” ಎಂದರು.
ನೌಕರರ ಶ್ರಮವನ್ನು ಪ್ರಶಂಸಿಸಿದ ಸಿಎಂ, “ನೀವು ಶ್ರಮಿಸಿ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಎಲ್ಲಾ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಾವು ನಿಮ್ಮ ಜೊತೆಗೆ ಇದ್ದೇವೆ,” ನೀವು ನಮ್ಮ ಜೊತೆಗೆ ಇರಿ ಎಂದು ಕರೆ ನೀಡಿದರು.