Sunday, April 20, 2025
Google search engine

Homeರಾಜ್ಯಮನುಷ್ಯ ದ್ವೇಷಿ ಧರ್ಮದ್ರೋಹಿಗಳ ಬಗ್ಗೆ ಎಚ್ಚರ ಇರಲಿ: ಸಿ.ಎಂ ಸಿದ್ದರಾಮಯ್ಯ ಕರೆ

ಮನುಷ್ಯ ದ್ವೇಷಿ ಧರ್ಮದ್ರೋಹಿಗಳ ಬಗ್ಗೆ ಎಚ್ಚರ ಇರಲಿ: ಸಿ.ಎಂ ಸಿದ್ದರಾಮಯ್ಯ ಕರೆ

ಬಳ್ಳಾರಿ: ಮನುಷ್ಯ ದ್ವೇಷಿ ಧರ್ಮದ್ರೋಹಿಗಳ ಬಗ್ಗೆ ಎಚ್ಚರ ಇರಲಿ. ಭಾರತ ಬಹುತ್ವದ ದೇಶ. ಸರ್ವಧರ್ಮ ಸಮನ್ವಯ ಭಾರತ ಮಣ್ಣಿನ ಗುಣ. ಇದನ್ನು ಕಾಪಾಡುವುದೇ ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಬಳ್ಳಾರಿ ಧರ್ಮಕ್ಷೇತ್ರದ ಅಮೃತ ಮಹೋತ್ಸವವನ್ನು ಉದ್ಘಾಟಿಸಿ, ಬಡ ಕುಟುಂಬಗಳಿಗೆ ಧರ್ಮ ಸಂಸ್ಥೆ ನೀಡಿದ ಉಚಿತ ಮನೆಗಳನ್ನು ಹಸ್ತಾಂತರಿಸಿ ಮಾತನಾಡಿದರು.ಯಾವ ಧರ್ಮವೂ ದ್ವೇಷವನ್ನು ಬೋಧನೆ ಮಾಡುವುದಿಲ್ಲ. ಪ್ರೀತಿ, ಮಾನವೀಯತೆ ಎಲ್ಲ ಧರ್ಮಗಳ ಸಾರ ಎಂದರು. ಧರ್ಮದ ಅರ್ಥ ಬಹಳ ಸರಳ. ಬಸವಣ್ಣನವರು ಹೇಳಿರುವಂತೆ ದಯೆಯೇ ಧರ್ಮದ ಮೂಲ. ದ್ವೇಷ ಅಸೂಯೆ ಇದ್ದ ಕಡೆ ಧರ್ಮ ಇರುವುದಿಲ್ಲ. ದ್ವೇಷದಿಂದ ಸಮಾಜ ಛಿದ್ರವಾಗುತ್ತದೆ ಎಂದರು.

ನಮ್ಮ ಧರ್ಮವನ್ನು ಪಾಲಿಸೋಣ. ಎಲ್ಲ ಧರ್ಮಗಳನ್ನೂ ಸಹಿಸಿಕೊಳ್ಳುವ ಸಹಿಷ್ಣುತೆ ಬೆಳೆಸಿಕೊಳ್ಳಿ ಎನ್ನುವುದೇ ನಮ್ಮ ಸಂವಿಧಾನದ ಮಹಾನ್ ಮೌಲ್ಯ. ಇದನ್ನು ಪಾಲಿಸುವುದೇ ನಾವು ಸ್ವಾಮಿ ವಿವೇಕಾನಂದರಿಗೆ, ಸಂವಿಧಾನಕ್ಕೆ ನೀಡುವ ಮಹೋನ್ನತ ಗೌರವ ಎಂದರು. ನಾನು ಯಾವುದೇ ಒಂದು ಧರ್ಮವನ್ನು ಓಲೈಸುವುದಿಲ್ಲ. ನಾನು ಹಿಂದುಗಳನ್ನು ಪ್ರೀತಿಸುವಂತೆಯೇ ಕ್ರೈಸ್ತ, ಮುಸ್ಲಿಂ, ಜೈನ, ಬೌದ್ಧ ಧರ್ಮದವರೆಲ್ಲರನ್ನೂ ಪ್ರೀತಿಸುತ್ತೇನೆ ಎಂದು ವಿವರಿಸಿದರು.

ಹಿಂದುಳಿದವರು, ಅಲ್ಪಸಂಖ್ಯಾತರು, ಶೂದ್ರರು, ದಲಿತರು ಮತ್ತು ಇಡೀ ಮಹಿಳಾ ಕುಲವನ್ನು ಈ ಜಾತಿ ವ್ಯವಸ್ಥೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿತ್ತು. ಆದರೆ, ನಮ್ಮ ಸಂವಿಧಾನ ಇವರೆಲ್ಲರನ್ನೂ ಜಾತಿ ಸಂಕೋಲೆಯಿಂದ ಬಿಡುಗಡೆಗೊಳಿಸಿ ಶಿಕ್ಷಣ ಒದಗಿಸಿತು ಎಂದರು. ನಾನು ವೀರಮಕ್ಕಳ ಕುಣಿತಕ್ಕೆ ಸೇರಿ ಶಿಕ್ಷಣದಿಂದ ವಂಚಿತನಾಗಿದ್ದೆ. ಆದರೆ ನಮ್ಮ ಸಂವಿಧಾನ ಮತ್ತು ಒಬ್ಬ ಗುರುಗಳ ಕಾರಣದಿಂದ ನಾನು ನೇರವಾಗಿ ಐದನೇ ತರಗತಿಯಿಂದ ಶಿಕ್ಷಣ ಪಡೆದೆ. ಪರಿಣಾಮ ನಾನು ಎರಡೆರಡು ಬಾರಿ ಮುಖ್ಯಮಂತ್ರಿ ಆದೆ ಎಂದರು.

ಬಸವಣ್ಣನವರು ೮೫೦ ವರ್ಷಗಳ ಹಿಂದೆ ಇವನಾರವ ಎನ್ನಬೇಡಿ, ಇವ ನಮ್ಮವ ಎನ್ನಿ ಎಂದು ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿದ್ದರು. ಆದರೆ, ಇವತ್ತಿಗೂ ಜಾತಿ ಹೋಗಿಲ್ಲ ಎಂದರು.

RELATED ARTICLES
- Advertisment -
Google search engine

Most Popular