ಹಾಸನ: ಸಿಎಂ ಸಿದ್ದರಾಮಯ್ಯನವರು ಮಂಗಳವಾರ ಹಾಸನಾಂಬೆ ದೇವಿ ಮತ್ತು ಸಿದ್ದೇಶ್ವರಸ್ವಾಮಿ ದೇವರ ದರ್ಶನ ಪಡೆದು ರಾಜ್ಯದಲ್ಲಿ ಮಳೆಗಾಗಿ ಪ್ರಾರ್ಥಿಸಿದರು. ದೇವರ ದರ್ಶನದ ಬಳಿಕ ಮಾತನಾಡಿ, ಉಸ್ತುವಾರಿ ಸಚಿವ ರಾಜಣ್ಣ ಅವರು ನನಗೆ ಹಾಸನಾಂಬೆ ದೇವಿಯ ಪೂಜೆ ಇದೆ, ಆಶೀರ್ವಾದ ಪಡೆಯಿರಿ ಎಂದು ಹೇಳಿದರು. ಹೀಗಾಗಿ ಇದೇ ಮೊದಲ ಬಾರಿಗೆ ಹಾಸನಾಂಬೆ ದರ್ಶನ ಪಡೆದಿದ್ದೇನೆ. ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಹಾಸನಾಂಬೆ ಪೂಜೆ ಚೆನ್ನಾಗಿ ಆಗಿದೆ. ಲಕ್ಷಾಂತರ ಜನರು ಭಾಗಿಯಾಗಿ ಹಾಸನಾಂಬೆಯ ಕೃಪೆಯನ್ನು ಪಡೆದಿದ್ದಾರೆ. ಹಾಸನಾಂಬೆ ದೇವಿ ಐತಿಹಾಸಿಕ ಮಹತ್ವ ಹೊಂದಿದ್ದು, ದೇವಾಲಯದ ಸಮೀಪವೇ ಸಿದ್ದೇಶ್ವರಸ್ವಾಮಿ ದೇವಾಲಯ ಇದೆ. ಎರಡೂ ದೇವರ ಆಶೀರ್ವಾದ ಬೇಡಿದ್ದೇನೆ. ರಾಜ್ಯದ ಜನರಿಗೆ ಒಳ್ಳೆಯದಾಗಲಿ. ರಾಜ್ಯದಲ್ಲಿ ಬರಗಾಲ ಇದೆ. ಹಿಂಗಾರು ಮಳೆಯಾದರೂ ಆಗಿ ರೈತರಿಗೆ ಅನುಕೂಲ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಈ ವರ್ಷ ತೀವ್ರ ಬರಗಾಲ ಇದೆ. ೨೧೪ ತಾಲೂಕುಗಳನ್ನು ಬರಗಾಲ ಎಂದು ಘೋಷಣೆ ಮಾಡಿದ್ದೇವೆ. ಇಡೀ ರಾಜ್ಯ ಬರಗಾಲಕ್ಕೆ ತುತ್ತಾದ ಕಾಲ ಇರಲಿಲ್ಲ. ಶೇಕಡಾ ೫೦ಕ್ಕೂ ಹೆಚ್ಚು ಪ್ರಮಾಣದ ಬೆಳೆ ನಷ್ಟವಾಗಿದೆ. ಪರಿಹಾರಕ್ಕೆ ನಾವು ಕೇಂದ್ರಕ್ಕೆ ಮನವಿ ಮಾಡಿದ್ದೆವು. ಕೇಂದ್ರ ಸರ್ಕಾರದ ನಾಲ್ಕು ತಂಡದವರು ಬರ ಪ್ರವಾಸ ಮಾಡಿ, ಅಧಿಕಾರಿಗಳಿಂದ ಜನರಿಂದ ಮಾಹಿತಿ ಪಡೆದು ಹೋಗಿದ್ದಾರೆ.
ನಮ್ಮ ಸಚಿವರು ಕೇಂದ್ರಕ್ಕೆ ಹೋಗಿ ಭೇಟಿ ಮಾಡಲು ಮುಂದಾದರೆ ಸಮಯ ಕೊಡಲಿಲ್ಲ. ಕಡೆಗೆ ನಾನು ಅಧಿಕಾರಿಗಳನ್ನಾದರು ಭೇಟಿ ಮಾಡಲು ಹೇಳಿದೆ. ಹಾಗಾಗಿ ಭೇಟಿ ಮಾಡಿ ಮನವಿ ಮಾಡಿ ಬಂದಿದ್ದಾರೆ. ಹೀಗಾದ್ರೆ ಏನು ಮಾಡಬೇಕು ಹೇಳಿ? ವಿರೋಧ ಪಕ್ಷದವರು ಜಗಳ ಮಾಡಬೇಡಿ ಅಂತಾರೆ. ನಾವು ಯಾಕೆ ಜಗಳ ಮಾಡೋಣ, ನಮಗೆ ಕೆಲಸ ಇಲ್ವಾ. ಹಾಸನಾಂಬೆ ಎಲ್ಲರಿಗೂ ಒಳ್ಳೆಯದು ಮಾಡಲಿ. ಎನ್.ಡಿ.ಆರ್.ಎಫ್ ಮಾನದಂಡ ಬದಲಾಯಿಸಲು ನಾವು ಪತ್ರ ಬರೆದಿದ್ದೇವೆ. ಇದುವರೆಗೆ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.