ಮೈಸೂರು: ದೇವರ ಹೆಸರಲ್ಲಿ ಮನುಷ್ಯರ ನಡುವೆ ಗೋಡೆ ಕಟ್ಟುವುದು – ದ್ವೇಷಿಸುವುದು ದೇವರಿಗೆ ಒಪ್ಪಿಗೆ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಂಜನಗೂಡು ತಾಲೂಕಿನ ಕಳಲೆ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಕಡೇಮಾಲಮ್ಮ ದೇವಸ್ಥಾನವನ್ನು ಉದ್ಘಾಟಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಕಡೇಮಾಲಮ್ಮ ದೇವಸ್ಥಾನ ಉದ್ಘಾಟಿಸಲು ಬಹಳ ಖುಷಿ ಆಗಿದೆ.
ದೇವಿಯಿಂದ ಇಡಿ ಕಳಲೆ ಗ್ರಾಮಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೀನಿ. ನನಗೆ ಈ ಊರಿನ ಪರಿಚಯ ಚೆನ್ನಾಗಿದೆ. ಈ ಊರಲ್ಲಿ ಎಲ್ಲ ಧರ್ಮ ಜಾತಿಯವರು ಸಹಬಾಳ್ವೆಯಿಂದ, ಸೌಹಾರ್ದತೆಯಿಂದ ಬದುಕುತ್ತಿರುವುದು ಮಾದರಿ, ಆದರ್ಶವಾಗಿದೆ. ಸಮಾಜದಲ್ಲಿ ಬಡವ ಶ್ರೀಮಂತವೆಂಬ ಮೇಲು ಕೀಳು ಬರಲು ಜಾತಿ ವ್ಯವಸ್ಥೆಯೇ ಕಾರಣ. ಆದರೆ, ಕಳಲೆ ಗ್ರಾಮದಲ್ಲಿ ಸರ್ವ ಜಾತಿಗಳ ಸೌಹಾರ್ದದ ಬದುಕು ಆಚರಣೆಯಲ್ಲಿದೆ ಎಂದು ಮೆಚ್ಚುಗೆ ಸೂಚಿಸಿದರು. ಎಲ್ಲ ಜಾತಿ-ಧರ್ಮದ ಬಡವರಿಗೆ ಆರ್ಥಿಕ ಶಕ್ತಿ ಬಾರದ ಹೊರತು ಅಸಮಾನತೆ ಹೋಗಲು ಸಾಧ್ಯವಿಲ್ಲ. ಈ ಕಾರಣದಿಂದಾಗಿ ನಮ್ಮ ಸರ್ಕಾರ ಆರ್ಥಿಕವಾಗಿ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ಅಂದು ಟೀಕಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಗ್ಯಾರಂಟಿ ಯೋಜನೆ ಕೈಗೊಳ್ಳುತ್ತಿದ್ದಾರೆ.
ಯಾವ ಸಮಾಜದಲ್ಲಿ ಒಗ್ಗಟ್ಟು ಇರುವುದಿಲ್ಲವೋ ಆ ಸಮಾಜ ಉಳಿಯಲು ಸಾಧ್ಯವಿಲ್ಲ. ಆದರೆ ಭಾರತದ ಎಲ್ಲ ಸಂಸ್ಥಾನಗಳು ಒಟ್ಟಾಗಿ ಗಟ್ಟಿಯಾಗಿ ಸೌಹಾರ್ದತೆ ಬೆಳೆಸಿಕೊಂಡಿವೆ. ಐತಿಹಾಸಿಕ ಇತಿಹಾಸ ಹೊಂದಿರುವ ಕಳಲೆ ಗ್ರಾಮ ಕೂಡ ಈ ಸಂಸ್ಕೃತಿಗೆ ಒಗ್ಗಿಕೊಂಡಿವೆ. ಇಲ್ಲಿನ ಲಕ್ಷ್ಮೀಕಾಂತ ದೇವಸ್ಥಾನದ ಜಾತ್ರೆ ಐತಿಹಾಸಿಕ ಎಂದು ವಿವರಿಸಿದರು.