ವಿಜಯಪುರ (ಬಾಗಲಕೋಟ): ಕೃಷ್ಣಾ ನದಿ ಭರ್ತಿ ಹಿನ್ನೆಲೆ ಆಲಮಟ್ಟಿ ಡ್ಯಾಂ ಗೆ ಸಿಎಂ ಸಿದ್ದರಾಮಯ್ಯ ಅವರಿಂದ ಬಾಗೀನ ಮಾಡಲಾಯಿತು.
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರೀ ಅಣೆಕಟ್ಟಿನಲ್ಲಿ ಕೃಷ್ಣೆಗೆ ಗಂಗಾಪೂಜೆ ಮಾಡಿ, ಬಾಗೀನ ಅರ್ಪಿಸಿದರು.
ಸಿಎಂ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ, ಸಚಿವರಾದ ಎಂ ಬಿ ಪಾಟೀಲ್, ಕೃಷ್ಣಭೈರೇಗೌಡ, ಶಿವಾನಂದ ಪಾಟೀಲ್ ಸೇರಿದಂತೆ ಇತರರು ಸಾಥ್ ನೀಡಿದರು.
ಬಳಿಕ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕದ ಜಲಾಶಯಗಳಲ್ಲಿ ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ಈ ಭಾಗದಲ್ಲಿ ನೀರಿನ ಸಮಸ್ಯೆ ಇರೋದಿಲ್ಲ. ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಕಡಿಮೆ ಆಗಿದೆ, ಅದಕ್ಕೆ 113ತಾಲೂಕುಗಳನ್ನು ಬರಗಾಲ ಎಂದು ಘೋಷಿಸಲಾಗಿದೆ. ಬಳಿಕ 73ತಾಲೂಕು ಬರಗಾಲ ಎನ್ನಲಾಗಿದೆ. 4ನೇ ತಾರಿಕಿನಂದು ಒಟ್ಟು ಎಷ್ಟು ತಾಲೂಕು ಬರಪೀಡಿತ ಎಂದು ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.

ಯಾವ ಯಾವ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿದೆ ಅವುಗಳನ್ನು ಬರಪೀಡಿತ ತಾಲೂಕು ಎಂದು ಘೋಷಿಸಲಾಗುವುದು. ಬಳಿಕ ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ಘೋಷಣೆಗೆ ಮನವಿ ಸಲ್ಲಿಸಲಾಗುವುದು. ಎನ್ ಡಿ ಆರ್ ಎಫ್ ನಿಯಮಗಳನ್ನು ೨೦೨೦ಯಿಂದ ಬದಲಾವಣೆ ಮಾಡಿಲ್ಲ. ಅದನ್ನು ಹೆಚ್ಚಿಗೆ ಮಾಡಲು ಪತ್ರದಲ್ಲಿ ಬರೆಯುತ್ತೇನೆ ಎಂದು ತಿಳಿಸಿದರು.
ಕೃಷ್ಣಾ ಯೋಜನೆಗಳಿಗೆ ಬಜೆಟ್ ನಲ್ಲಿ ಹಣ ಇಡುವ ವಿಚಾರವಾಗಿ ಮಾತನಾಡಿ, ಹಿಂದಿನ ಸರ್ಕಾರದವರು ಇಟ್ಟಿದ್ದ ೨೧ಸಾವಿರ ಕೋಟಿ ಹಣವನ್ನು ನಾವು ಮುಂದುವರೆಸಿದ್ದೇವೆ. ತುಂಗಭದ್ರಾ ಯೋಜನೆಗೆ ಕೇಂದ್ರದಿಂದ ೫ಸಾವಿರ ಕೋಟಿ ಬರ್ತದೆ ಎಂದು ಹಿಂದಿನ ಸರ್ಕಾರದವರು ಹೇಳಿದ್ರು, ಬಂತಾ? ಬಂದಿಲ್ಲವಲ್ಲ. ಕೃಷ್ಣಾ ಯೋಜನೆಗೆ ನಾವು ಯಾವುದೇ ಹಣ ಕಡಿಮೆ ಮಾಡಿಲ್ಲ ಎಂದರು.
ಈಗ ೧೩೦ಟಿಎಂಸಿ ನೀರು ಸಂಗ್ರಹ ಇದೆ, ಡ್ಯಾಂ ಎತ್ತರ ೫೧೯ ಇದೆ, ಇದು ೫೨೩ ಮೀಟರ್ ಎತ್ತರಕ್ಕೆ ಹೆಚ್ಚಳ ಆದಾಗ ಆಂದ್ರ, ಕರ್ನಾಟಕಕ್ಕೆ ಬೇಕಾದಷ್ಟು ನೀರಿನ ಹಂಚಿಕೆ ಸರಿಯಾಗಿ ಆಗಲಿದೆ. ಕೃಷ್ಣಾ ಯೋಜನೆಗೆ ೮೩ಸಾವಿರ ಕೋಟಿ ಬೇಕಾಗಬಹುದು, ಆದ್ರೆ ಇನ್ನು ಗೆಜೆಟ್ ನೋಟಿಫಿಕೇಷನ್ ಆಗಬೇಕಿದೆ ಎಂದರು.
ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡುವ ವಿಚಾರ ಕುರಿತು ಪ್ರತಿಕ್ರಿಯಿಸಿ, ನಮ್ಮ ಹತ್ರ ನೀರಿಲ್ಲ, ಆದರೂ ಪ್ರತಿದಿನ ೫ಸಾವಿರ ಕ್ಯೂಸೆಕ್ ಪ್ರತಿದಿನ ಬಿಡಬೇಕು ಅಂತ ಆದೇಶ ಆಗಿದೆ. ತಮಿಳುನಾಡಿನವರು ಪ್ರತಿದಿನ ೨೪ಸಾವಿರ ಕ್ಯೂಸೆಕ್ ಬಿಡಬೇಕು ಎಂದು ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕಿದ್ದಾರೆ. ಅಷ್ಟು ನೀರು ಇಲ್ಲ, ಬಿಡಲು ಆಗೋದಿಲ್ಲ, ನೀರು ಸಂರಕ್ಷಿಸೋ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಇಸ್ರೋದಿಂದ ಆದಿತ್ಯ ೧೧ ರಾಕೆಟ್ ಉಡಾವಣೆ ವಿಚಾರವಾಗಿ ಮಾತನಾಡಿ, ನಾವು ಈಗಾಗಲೇ ವಿಜ್ಞಾನಿಗಳಿಗೆ ಅಭಿನಂದನೆ ಹೇಳಿದ್ದೇವೆ. ಇವತ್ತು ಲಾಂಚ್ ಆಗಿರುವ ರಾಕೆಟ್ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಈ ವೇಳೆ ವಿಜಯಪುರ- ಬಾಗಲಕೋಟೆ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.