ಮೈಸೂರು : ಕಡಿಮೆ ಬೆಲೆಯಲ್ಲಿ ಬಡವರ ಹಸಿವು ನೀಗಿಸುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಮೈಸೂರಿನಲ್ಲಿ ಗಂಭೀರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಮುಚ್ಚುವಂತಹ ಪರಿಸ್ಥಿತಿ ಎದುರಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಸಿಎಂ ಆಗಿದ್ದಾಗ ರಾಜ್ಯದ ಬಡವರು, ಕೂಲಿ ಕಾರ್ಮಿಕರು, ಕೆಲಸಗಾರರಿಗೆ ಸ್ವಚ್ಛ, ಪೌಷ್ಟಿಕ ಆಹಾರವನ್ನು ಕಡಿಮೆ ದರದಲ್ಲಿಒದಗಿಸಿ ಹಸಿವು ಮುಕ್ತ ಕರ್ನಾಟಕ ನಿರ್ಮಿಸುವ ಆಶಯದೊಂದಿಗೆ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಅನ್ನು ತಂದಿದ್ದರು. ಆದರೆ ಈಗ ಬಡವರಿಗೆ ಅನ್ನ ನೀಡುತ್ತಿದ್ದ ಇಂದಿರಾ ಕ್ಯಾಂಟೀನ್ ಸ್ವತಃ ಆರ್ಥಿಕ ಸಂಕಷ್ಟದಲ್ಲಿದೆ.
ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ14, ತಾಲೂಕು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ12 ಸೇರಿ ಒಟ್ಟು ಜಿಲ್ಲೆಯಲ್ಲಿ26 ಕ್ಯಾಂಟೀನ್ಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲಾ ನಗರಾಭಿವೃದ್ಧಿ ಕೋಶದ ಮಾಹಿತಿ ಪ್ರಕಾರ ಜಿಲ್ಲೆಯ ಈ ಎಲ್ಲಬ ಕ್ಯಾಂಟೀನ್ಗಳ ಗುತ್ತಿಗೆದಾರರಿಗೆ 4.49 ಕೋಟಿ ರೂ. ಬಾಕಿ ಮೊತ್ತ ಪಾವತಿಸಬೇಕಿದೆ.
ಅದರಲ್ಲಿಯೂ ಮುಖ್ಯವಾಗಿ ನಗರ ವ್ಯಾಪ್ತಿಯ 6 ಕ್ಯಾಂಟೀನ್ಗಳ ಗುತ್ತಿಗೆದಾರರಿಗೆ ಅಕ್ಟೋಬರ್ 2024ರಿಂದ ಜನವರಿ 2026ರವರೆಗೆ ಒಂದು ವರ್ಷ ಐದು ತಿಂಗಳಿಗೆ 2.82 ಕೋಟಿ ರೂ. ಹಣ ಪಾವತಿಸಬೇಕಿದೆ. ಹೀಗಾಗಿ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕ್ಯಾಂಟೀನ್ಗಳ ಕಾರ್ಯನಿರ್ವಹಣೆಗೆ ತೊಂದರೆ ಉಂಟಾಗಿದ್ದು, ಆಹಾರದ ಗುಣಮಟ್ಟ, ಪೂರೈಕೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಎದುರಾಗಿದೆ ಎನ್ನಲಾಗಿದ್ದು, ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ಗಳು ಹಲವು ಬಾರಿ ಹಣಕಾಸಿನ ಕೊರತೆ, ಬಾಕಿ ಪಾವತಿ ಸಮಸ್ಯೆಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿವೆ.
ಬೆಂಗಳೂರಿನಲ್ಲಿಕೂಡ ಇತ್ತೀಚೆಗೆ ಲಕ್ಷಾಂತರ ರೂ. ಬಾಕಿಯಿಂದಾಗಿ ಕೆಲವು ಕ್ಯಾಂಟೀನ್ಗಳು ತಾತ್ಕಾಲಿಕವಾಗಿ ಮುಚ್ಚಿವೆ. ಇದೀಗ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿಯೂ ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಣೆಗೆ ಹಣಕಾಸಿನ ಕೊರತೆ ಎದುರಾಗಿದೆ. ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಕ್ಯಾಂಟೀನ್ಗಳನ್ನು ಮುಚ್ಚುವ ಸ್ಥಿತಿ ಶೀಘ್ರವೇ ಬರಲಿದೆ.



