ಮೈಸೂರು: ವರುಣಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಬದ್ಧರಾಗಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ಧರಾಮಯ್ಯ ತಿಳಿಸಿದರು.
ವರುಣಾ ಕ್ಷೇತ್ರದ ಕೀಳನಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಂ.ಸಿ.ಹುಂಡಿ, ಇನಾಂಉತ್ತನಹಳ್ಳಿ ಕೀಳನಪುರ, ಮೇಗಳಾಪುರ, ಮಾಧವಗೆರೆ, ಗುರುಕಾರಪುರ, ದುದ್ದಗೆರೆ ಗ್ರಾಮಗಳಿಗೆ ಭೇಟಿ ನೀಡಿ ಕಂದಾಯ ಅದಾಲತ್ನಲ್ಲಿ ಭಾಗವಹಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ನಮ್ಮ ತಂದೆಯವರಿಗೆ ಹೆಚ್ಚು ಮತಗಳನ್ನು ಕೊಟ್ಟು ೨ನೇ ಬಾರಿಗೆ ಮುಖ್ಯಮಂತ್ರಿಯಾಗಲು ಕಾರಣರಾಗಿದ್ದೀರಿ, ನಿಮಗೆ ಅನಂತ ಧನ್ಯವಾದಗಳು ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಸಹ ಪರಿಶೀಲಿಸಿ ಬಗೆಹರಿಸುತ್ತೇವೆ. ಇನಾಂಉತ್ತನಹಳ್ಳಿ ಮಾರಮ್ಮ ದೇವಸ್ಥಾನಕ್ಕೆ ಈಗಾಗಲೇ ೬ ಲಕ್ಷ ಹಣ ಬಿಡುಗಡೆಯಾಗಿದೆ ಉಳಿದ ೪ ಲಕ್ಷ ರೂಗಳನ್ನು ಬಿಡುಗಡೆ ಮಾಡಿಸುತ್ತೇನೆ. ನಾನು ಈ ಊರಿಗೆ ಮತ್ತೊಮ್ಮೆ ಬರುವುದರೊಳಗೆ ಈ ದೇವಸ್ಥಾನದ ಕಾಮಗಾರಿ ಮುಗಿದಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಿಧವಾವೇತನ, ಮಾಶಾಸನ, ಖಾತೆ ಹಾಗೂ ಇತರೆ ಸಮಸ್ಯೆಗಳನ್ನು ಅಧಿಕಾರಿಗಳು ಜನರನ್ನು ಅಲೆಸದೆ ಕೆಲಸಮಾಡಿ ಕೊಡಬೇಕು. ಹಗಲು ವೇಳೆ ವಿದ್ಯುತ್ ಅನ್ನು ರೈತರ ಪಂಪ್ಸೆಟ್ಗಳಿಗೆ ಸರಬರಾಜು ಮಾಡುವಂತೆ ಕೇಳಿದ್ದೀರಿ ಸಂಬಂಧ ಪಟ್ಟ ಕೆ.ಇ.ಬಿ. ಇಂಜಿನಿಯರ್ ಜೊತೆ ಮಾತನಾಡಿದ್ದೇನೆ. ಹಗಲು ವೇಳೆ ೩ ಫೇಸ್ಗಳಲ್ಲಿ ಕೊಡಿಸಲು ಪ್ರಯತ್ನಿಸುತ್ತೇನೆ ಎಂದ ಅವರು ಕೀಳನಪುರ ಶಾಲಾ ಆವರಣದಲ್ಲಿ ನೆಸ್ಲೆ ಇಂಡಿಯಾ ಲಿಮಿಟೆಡ್ರವರು ೩.೪೦ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶೌಚಾಲಯವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ನಂಜುಡಸ್ವಾಮಿ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಬಸವರಾಜು ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಬೀರೇಗೌಡ ಕೆ.ಪಿ.ಸಿ.ಸಿ ಕಾರ್ಯದರ್ಶಿ ವರುಣಾ ಮಹೇಶ ತಾ.ಪಂ ಮಾಜಿ ಸದಸ್ಯರಾದ ಮಹಾದೇವಪ್ಪ ಎಂ.ಟಿ.ರವಿಕುಮಾರ್ ನೆಸ್ಲೆ ಕಂಪನಿಯ ಶ್ರೀನಿವಾಸ ಮೂರ್ತಿ, ಪಟೇಲ್ ಮಹಾದೇವಪ್ಪ, ರಾಜೇಶ್, ನಿಂಗಯ್ಯ, ಸೋಮಣ್ಣ, ಸಕ್ಕುಬಾಯಿ, ಮುಖ್ಯಮಂತ್ರಿಗ ವಿಶೇಷ ಅಧಿಕಾರಿ ವಿಜಯ್, ಆಪ್ತ ಸಹಾಯಕರಾದ ಶಿವಸ್ವಾಮಿ, ಪ್ರದೀಪ್ ಕುಮಾರ್, ಉಪತಹಸಿಲ್ದಾರ್ ಲತಾ ಶರಣಮ್ಮ, ತಾ.ಪಂ. ಸಹಾಯಕ ನಿರ್ದೇಶಕ ಡಿ.ಸಿ.ಶಿವಣ್ಣ, ಬಿ.ಆರ್.ಸಿ. ಮಹಾದೇವ್, ಶಂಕರ್, ಬಸವರಾಜು, ಶಾಲೆಯ ಮುಖ್ಯ ಶಿಕ್ಷಕ, ಮಾಲಂಗಿ ಸುರೇಶ್ ಹಾಜರಿದ್ದರು.