ಮಸಣದ ಹೂವು ಚಿತ್ರದಿಂದ ಮುಂದಿನ ನಿಲ್ದಾಣದ ವರೆಗೂ ಅಪರ್ಣಾ ರವರ ಧ್ವನಿ ಅಮರ :- ನಿರೂಪಕ ಅಜಯ್ ಶಾಸ್ತ್ರಿ
ಮೈಸೂರು: ಕನ್ನಡದ ಸ್ಪಷ್ಟ ಭಾಷಾ ಶೈಲಿಯ ಧ್ವನಿಯು ಕನ್ನಡಿಗರ ಪ್ರೀತಿ ವಿಶ್ವಾಸಗಳಿಸಿ ಕಾರ್ಯಕ್ರಮಗಳ ನಿರೂಪಣೆ ಮೂಲಕ ಜನಮಾನಸದಲ್ಲಿ ಅಚ್ಚುಳಿದ ನಿರೂಪಕಿ ಹಾಗೂ ನಟಿ ಅಪರ್ಣಾ ಅವರ ನಿಧನಕ್ಕೆ ಜೈಭೀಮ್ ಜನಸ್ಪಂದನ ವೇದಿಕೆ ಸೋಮವಾರ ಲಕ್ಷ್ಮಿಪುರಂ ಬಡಾವಣೆಯಲ್ಲಿ ನುಡಿನಮನ ಸಲ್ಲಿಸಲಾಯಿತು.
ದಸರಾ ವಸ್ತು ಪ್ರದರ್ಶನದ ನಿರೂಪಕ ಅಜಯ್ ಶಾಸ್ತ್ರಿ ಮಾತನಾಡಿ, ಮನೆಯೇ ಮೊದಲ ಪಾಠಶಾಲೆ ಎಂಬುದಕ್ಕೆ ನಿದರ್ಶನವಾಗಿ ಅಪರ್ಣಾ ರವರಿಗೆ ಕನ್ನಡಭಾಷಾ ಸಾಹಿತ್ಯ ಅಭಿರುಚಿ ಬರಲು ಕಾರಣ ಅವರ ತಂದೆ ಚಿತ್ರಪತ್ರಕರ್ತರಾದ ಕೆಎಸ್ ನಾರಾಯಣಸ್ವಾಮಿ ರವರು, ನಂತರ ಅವರ ತಂದೆಯ ಆಪ್ತರಾದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ರವರ ಮಸಣದ ಹೂವು ಚಿತ್ರದ ಗಂಭೀರಪಾತ್ರಗಳ ನಟನೆಯ ಮೂಲಕ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡರು, ಆಕಾಶವಾಣಿ ದೂರದರ್ಶನದಲ್ಲಿ ವಾರ್ತೆ ಸುದ್ಧಿವಾಚಕರಾಗಿ, ಪ್ರಧಾನಿ ರವರ ಸಂದರ್ಶನ, ದೀಪಾವಳಿ ಕಾರ್ಯಕ್ರಮದ ಸತತ 8ಘಂಟೆಗಳ ನಿರರ್ಗಳವಾಗಿ ನಿರೂಪಣೆ, ಕನ್ನಡ ಸಂಸ್ಕೃತಿ ಇಲಾಖೆಯ ಮೈಸೂರು ದಸರಾ, ಹಂಪಿ ಉತ್ಸವ, ಕರಾವಳಿ ಹಬ್ಬ ಸೇರಿದಂತೆ ಬಹುತೇಖ ಕಾರ್ಯಕ್ರಮಗಳ ನಿರೂಪಕಿಯಾಗಿ ಜನಪ್ರಿಯತೆ ಪಡೆದವರು.
ಟಿಎನ್ ಸೀತಾರಾಮ್ ರವರ ಮೂಡಲ ಮನೆ ಮುಕ್ತಮುಕ್ತ ಧಾರವಾಹಿಗಳಲ್ಲಿ ಅವರು ಕಾಣಿಸಿಕೊಂಡ ವಕೀಲ ಪಾತ್ರವೂ ಜನಪ್ರಿಯವಾಗಿತ್ತು, ಮಜಾ ಟಾಕೀಸ್ ಕಾರ್ಯಕ್ರಮದ ವರಲಕ್ಷ್ಮಿ ಪಾತ್ರ ಹಾಸ್ಯಲೋಕದಲ್ಲಿ ಪ್ರೇಕ್ಷಕರನ್ನ ಕರೆದುಕೊಂಡು ಹೋಗಿತ್ತು, ಸರ್ಕಾರಿ ಕಾರ್ಯಕ್ರಮಗಳ ಅಚ್ಚುಕಟ್ಟಾದ ನಿರೂಪಣೆ ಬಹುಬೇಡಿಕೆಯಾಗಿದ್ದರು, ಮಜಾ ಟಾಕೀಸ್ ರ ಬಸ್ ನಿಲ್ದಾಣ ಮತ್ತು ಬೆಂಗಳೂರು ನಮ್ಮ ಮೆಟ್ರೋದಲ್ಲಿ ಮುಂದಿನ ನಿಲ್ದಾಣ ಎನ್ನುವ ಅವರ ಧ್ವನಿ ಕನ್ನಡಿಗರ ಮನೆ, ಮನವನ್ನು ಮುಟ್ಟಿತ್ತು ಎಂದು ಸ್ಮರಿಸಿದರು.
ಅಪರ್ಣಾ ರವರಿಗಿದ್ದ ಕನ್ನಡದ ಸಾಹಿತ್ಯ ಪರಿಚಯ ಭಾಷಾ ಹಿಡಿತ, ಮಾಹಿತಿ ಸಂಗ್ರಹ, ನಿಖರತೆ ಸ್ಪಷ್ಟತೆ ಇಂದಿನ ನಿರೂಪಕರಿಗೆ ಮಾದರಿಯಾಗಿದೆ, ಯಾವುದೇ ಕಾರ್ಯಕ್ರಮವಿರಲಿ ಆಯೋಜಕರೊಂದಿಗೆ ಪೂರ್ವ ಸಿದ್ಧತೆಯ ಮಾಹಿತಿ ಪಡೆದುಕೊಳ್ಳುತ್ತಿದ್ದ ಅವರ ಸರಳತೆ ಮನೋಭಾವ ಮೆಚ್ಚುವಂತದ್ದು ನಿರೂಪಣಾ ಕ್ಷೇತ್ರಕ್ಕೆ ಮನ್ನಣೆ ಗೌರವ ತಂದೊಟ್ಟವರು ಅಪರ್ಣಾ, ಅವರ ಬದುಕಿನ ಸಮಯದ ಮಹದಾಸೆಯಾದ ಕನ್ನಡ ಭಾಷೆಯ ಬೆಳೆಸುವ ಉಳಿಸಲು ನಿರೂಪಣಾ ಶಾಲೆ ತೆರೆಯಬೇಕು ಎನ್ನುವ ಸಂಕಲ್ಪ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಕಾರಗೊಳಿಸಲು ಮುಂದಾಗಲಿ ಎಂದರು.
ಇದೆ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ನಿರೂಪಕ ಅಜಯ್ ಶಾಸ್ತ್ರಿ, ಜಿ ರಾಘವೇಂದ್ರ, ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷರಾದ ಚೇತನ್ ಕಾಂತರಾಜು, ರವಿಚಂದ್ರ, ವರುಣ ಮಹಾದೇವ್, ಲೋಕೇಶ್, ಗೋಬಿ ನಾಗರಾಜ್, ಸ್ವಾಮಿ, ಕಡಕೋಳ ಶಿವು, ಸಂತೋಷ್ ಕಿರಾಲು, ಎಸ್ ಎನ್ ರಾಜೇಶ್, ರಾಕೇಶ್, ಹರೀಶ್ ನಾಯ್ಡು, ದುರ್ಗಾ ಪ್ರಸಾದ್ ಹಾಗೂ ಇನ್ನಿತರರು ಸಂತಾ ಸಭೆಯಲ್ಲಿ ಭಾಗಿಯಾಗಿದ್ದರು.