ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರ್ಕಾರ ಕಳೆದ ಮೂರು ತಿಂಗಳಿಂದ ರಾಜ್ಯದ ಸುಮಾರು 16 ಲಕ್ಷಕ್ಕೂ ಹೆಚ್ಚು ಬಡ ಜನರ ವೃದ್ಧಾಪ್ಯ ವೇತನ, ವಿಧವಾ ಪಿಂಚಣಿ, ಸಂಧ್ಯಾ ಸುರಕ್ಷಾ ಹಾಗೂ ವಿಶೇಷಚೇತನರ ಮಾಸಿಕ ಪಿಂಚಣಿಯನ್ನು ಕುಂಟು ನೆಪ ಹೇಳಿ ತಡೆ ಹಿಡಿದಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಪಿಂಚಣಿಯನ್ನೇ ನಂಬಿ ಜೀವನವನ್ನು ಸಾಗಿಸುತ್ತಿದ್ದ ಲಕ್ಷಾಂತರ ಬಡ ಕುಟುಂಬದ ಅನ್ನದ ಬಟ್ಟಲಿಗೆ ಕಾಂಗ್ರೆಸ್ ಕಲ್ಲು ಹಾಕಿದೆ. ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರ ಲಕ್ಷಾಂತರ ಫಲಾನುಭವಿಗಳನ್ನು ಪರಿಷ್ಕರಣೆಯ ನೆಪದಲ್ಲಿ ಹೊರಗಿಡುತ್ತಿದೆ ಎಂದು ಕಿಡಿಕಾರಿದೆ.
ದೈನಂದಿನ ಮನೆ ಖರ್ಚಿಗೆ, ಮಾತ್ರೆ-ಔಷಧಿ ಖರೀದಿಸಲು ಈ ಪಿಂಚಣಿ ಹಣವನ್ನೇ ನಂಬಿಕೊಂಡಿದ್ದ ಅಸಹಾಯಕ ವೃದ್ಧರು, ಅಂಗವಿಕಲರು ಮತ್ತು ವಿಧವೆಯರು ಸರ್ಕಾರದ ಈ ಕ್ರಮದಿಂದ ಕಂಗಾಲಾಗಿದ್ದಾರೆ ಎಂದು ಆರೋಪಿಸಿದೆ. ರಾಜ್ಯ ಸರ್ಕಾರ ಕುಂಟು ನೆಪಗಳನ್ನು ಹೇಳದೆ, ಅರ್ಹ ಫಲಾನುಭವಿಗಳಿಗೆ ಪಿಂಚಣಿಯನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದೆ.



