ಮೈಸೂರು: ವರ್ಗಾವಣೆ ದಂಧೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನಿರತವಾಗಿದ್ದು, ಕಳೆದ ಎರಡು ತಿಂಗಳಲ್ಲಿ ರಾಜ್ಯದ ಕಾನೂನು ಸುವ್ಯವ್ಥೆಯನ್ನು ಹಾಳು ಮಾಡಿದ್ದಾರೆ ಎಂದು ಮೈಸೂರು ಬಿಜೆಪಿ ನಗರ ವಕ್ತಾರ ಮೋಹನ್ ಕುಮಾರ್ ವಾಗ್ದಾಳಿ ನಡೆಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಮಾತನಾಡಿದ ಮೋಹನ್ ಕುಮಾರ್, ಸರ್ಕಾರಕ್ಕೆ ಹನಿಮೂನ್ ಟೈಮ್ ಕೊಟ್ಟಿದ್ದೆವು. ಅದರಂತೆ ಏನು ಮಾತನಾಡದೆ ಸುಮ್ಮನಿದ್ದೇವು. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳು ಮಾಡಿದ್ದಾರೆ. ಟಿ.ನರಸೀಪುರ ಹಾಗೂ ಶಿವಮೊಗ್ಗದಲ್ಲಿ ನಡೆದ ಕೊಲೆಗಳು ಇವರ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆರೋಪಿಸಿದರು.
ದೇಶದಲ್ಲಿರುವ ವಿರೋಧ ಪಕ್ಷಗಳನ್ನು ಒಗ್ಗೂಡಿಸಿ ಸಭೆ ಮಾಡಿದರು. ಆ ಸಭೆಗೆ ರಾಜಕೀಯ ನಾಯಕರನ್ನು ಕರೆ ತರಲು ಐಎಎಸ್ ಅಧಿಕಾರಿಗಳನ್ನು ಬಳಸಿದ್ದು ಖಂಡನೀಯ. ಇದನ್ನು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದ್ರೆ ಉತ್ತರ ಕೊಡಲಿಲ್ಲ. ಈ ಬಗ್ಗೆ ವಿಪಕ್ಷಗಳು ಸದನದಲ್ಲಿ ಧರಣಿ ಮಾಡಿದ್ದವು. ಬಿಜೆಪಿಯ ಹತ್ತು ಶಾಸಕರನ್ನು 3 ದಿನದ ಸದನಕ್ಕೆ ಬರದಂತೆ ವಜಾ ಮಾಡಿದರು. ಇದು ಕಾಂಗ್ರೆಸ್ ಸರ್ಕಾರದ ಗೂಂಡಾ ವರ್ತನೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಕ್ತಾರ ಮೋಹನ್ ಕುಮಾರ್ ಹರಿಹಾಯ್ದರು.