ವಿಜಯಪುರ : ಕಾಂಗ್ರೆಸ್ ಯಾವತ್ತೂ ಆರ್ಥಿಕತೆ ಮೂಲವಾದ ವ್ಯಾಪಾರ-ವಹಿವಾಟಿನ ಪರವಿದೆ. ನಾವು ವ್ಯಾಪಾರಿಗಳ ಹಿತ ಕಾಪಾಡುತ್ತಾ ಬಂದಿದ್ದೇವೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ವಿಜಯಪುರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರ ಪರವಾಗಿ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಡೆದ ವ್ಯಾಪಾರಿಗಳ ಹಾಗೂ ಎಲ್ಲ ಸಂಘಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು. ದೇಶ ಈ ಹತ್ತು ವರ್ಷಗಳಲ್ಲಿ ಏನೇನು ಅನುಭವಿಸಿದೆ ನಿಮಗೆ ಗೊತ್ತಿದೆ. ಎಲ್ಲದರ ಮೇಲೆ ಜಿಎಸ್ಟಿ ದಾಳಿಯನ್ನು ವ್ಯಾಪಾರಿಗಳಾದ ನೀವು ಅನುಭವಿಸಿದ್ದೀರಿ. ಮನಮೋಹನ್ ಸಿಂಗ್ ಅವರು ಇದ್ದಾಗ ದೇಶದ ಆರ್ಥಿಕ ಸ್ಥಿತಿ ಅತ್ಯಂತ ಬಲಿಷ್ಠವಾಗಿತ್ತು. ಆದರೆ ಮೋದಿ ಆಡಳಿತ ಬಂದ ಮೇಲೆ ಅದು ಕುಸಿಯುತ್ತ ಬಂದಿದೆ. ಇದರ ನೇರ ಪರಿಣಾಮವನ್ನು ನೀವು ಉಂಡಿದ್ದೀರಿ ಎಂದು ವಿವರಿಸಿದರು.
ಚುನಾವಣಾ ಬಾಂಡ್ ಮೂಲಕ ಅನಧಿಕೃತವಾಗಿ ಹಣ ಎತ್ತಲಾಗಿದೆ. ಹೆದರಿಸಿ-ಬೆದರಿಸಿ ವ್ಯಾಪಾರಿಗಳ, ಉದ್ಯೋಗಪತಿಗಳಿಂದ ವಸೂಲಿ ಮಾಡಲಾಗಿದೆ. ಇದೆಲ್ಲವನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಜಿಲ್ಲೆಯ ತೋಟಗಾರಿಕೆ, ಎಲ್ಲ ಬೆಳೆಗಳ ಹಿತ, ಅಭಿವೃದ್ಧಿಗೆ ಹಾಗೂ ನಿಮ್ಮ ವ್ಯಾಪಾರ-ವಹಿವಾಟಿನ ಉಳಿವಿಗಾಗಿ ಯೋಚಿಸಿ ಮತ ನೀಡಿ. ಶರದ್ ಪವಾರ ಅವರ ಬಾರಾಮತಿಯಂತೆ ವಿಜಯಪುರವನ್ನು ಬೆಳೆಸೋಣ ಎಂದು ಹೇಳಿದರು.
ಮಾರುಕಟ್ಟೆ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಎಪಿಎಂಸಿಗಾಗಿ ಕೇಂದ್ರ ಸರಕಾರವನ್ನು ಮೀರಿ ನಿಮ್ಮೊಂದಿಗೆ ನಿಂತಿದ್ದು ರಾಜ್ಯ ಸರ್ಕಾರ. ಇದರಿಂದ ನಿಮಗೆ ಬಹುಪಯೋಗವಾಗಿದೆ. ಯಾರು ಯಾರೋ ಬಂದು ನಮ್ಮನ್ನು ಬೈದು ಮತ ಕೇಳುವವರ ಮಾತು ಕೇಳಬೇಡಿ. ಸದ್ಯದ ಸಂಸದನಿಗೆ ಪದೇ ಪದೇ ಅಧಿಕಾರ ನೀಡಿದರೂ ನಿಮ್ಮ ಹಣೆ ಬರಹ ಬದಲಾಗಿಲ್ಲ. ದೇಶವನ್ನು ಮೋದಿ-ಶಾ ಮಾತ್ರ ಆಳುತ್ತಿದ್ದಾರೆ. ನೀವೆಲ್ಲ ತಿಳಿದವರು. ಹಮಾಲರು ಊಟಕ್ಕೂ ಪರಿದಾಡುತ್ತಿದ್ದಾರೆ. ಮೋದಿ ದೊಡ್ಡವರ ಪರ ಇದ್ದಾರೆ. ಸಣ್ಣ ವ್ಯಾಪಾರಿಗಳ ಕಾಳಜಿ ಅವರಿಗಿಲ್ಲ ಎಂದರು.