ಮಂಡ್ಯ: ಸಮಾಜ ಒಡೆಯುವುದು ಕಾಂಗ್ರೆಸ್ ಸರ್ಕಾರದ ಉದ್ದೇಶ. ಸಮಾಜವನ್ನ ವಿಶ್ವಾಸ ತೆಗೆದುಕೊಳ್ಳುವುದು ಇವರಿಗೆ ಬೇಕಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಮಂಡ್ಯದಲ್ಲಿ ಜಾತಿಗಣತಿಗೆ ಒಕ್ಕಲಿಗರ ವಿರೋಧ ವಿಚಾರವಾಗಿ ಮಾತನಾಡಿ, ಸಿಎಂ ಟ್ವೀಟ್ ನಾನು ಗಮನಿಸಿದ್ದೇನೆ. ರಾಹುಲ್ ಗಾಂಧಿ ಭಾವನೆಗೆ ಸ್ಪಂದಿಸಿ ಜಾತಿಗಣತಿ ಪಡೆಯುವ ನಿರ್ಧಾರ ಮಾಡಿದ್ದಾರೆ. ಕಾಂತರಾಜು ವರದಿ ಮೂಲ ಪ್ರತಿ ಕಳ್ಳತನವಾದ ಮಾಹಿತಿ ಇದೆ. ಒಂದು ಕಡೆ ಮೂಲ ಪ್ರತಿ ಇಲ್ಲ. ಕಾಂತರಾಜು ವರದಿಯನ್ನು ಕುಮಾರಸ್ವಾಮಿ ತಿರಸ್ಕಾರ ಮಾಡಿದ್ರು ಎಂದು ಆರೋಪಿಸಿದ್ರು. ನನ್ನ ಕಾಲದಲ್ಲಿ ಕಾಂತರಾಜು ವರದಿ ಸಂಪೂರ್ಣ ಸಿದ್ದವಾಗಿದ್ರೆ. ಇವರು ಅಧಿಕಾರ ಹಿಡಿದ ಈ 6 ತಿಂಗಳಲ್ಲಿ ಯಾಕೆ ವರದಿಗೆ ಒಪ್ಪಿಗೆ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಸಂಪೂರ್ಣ ಜನಗಣತಿ ಹಾಗೂ ಮನಗಳಿಗೆ ಭೇಟಿ ಕೊಟ್ಟಿಲ್ಲ. ಅವರಿಗೆ ಬೇಕಾದ ಹಾಗೇ ವರದಿ ಸಿದ್ದವಾಗಿರುವುದು ಜಗಜ್ಜಾಹಿರ. ರಾಷ್ಟ್ರೀಯ ನಾಯಕರ ಮೆಚ್ಚಿಸಲು ಈಗ ವರದಿ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ. ಕಾಂತರಾಜು ಕಮಿಟಿ ರಚನೆ ಮಾಡಿ 10 ವರ್ಷ ಕಳೆದಿದೆ.ಈ ಹತ್ತು ವರ್ಷಗಳಲ್ಲಿ ಹಲವಾರು ಬೆಳವಣಿಗೆ ಆಗಿದೆ. ಮನೆಯಲ್ಲಿ ಕುಳಿತು ಬರೆದರೋ ಇಲ್ಲಾ ಆಗಿನ ಸಿಎಂ ಬರೆಸಿದರೋ ಗೊತ್ತಿಲ್ಲ. ಅವತ್ತಿನ ಮೆಂಬರ್ ಸೆಕ್ರೆಟರಿ ವರದಿಗೆ ಸಹಿ ಹಾಕದಿರಲು ಕಾರಣವೇನು ಎಂದು ಕಿಡಿಕಾರಿದರು.
ಜಾತಿಯ ಹೆಸರಿನಿಂದ ನಾನು ವಿರೋಧ ವ್ಯಕ್ತಪಡಿಸಲ್ಲ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂದು ಅವರೇ ಹೇಳುತ್ತಾರಲ್ವಾ? ನಮ್ಮದು ಸುಳ್ಳೆ ನಮ್ಮ ಮನದೇವರು ಅಂತಾರೆ. ಪಾಪ ಇವರು ಸತ್ಯಹರಿಶ್ಚಂದ್ರ ವಂಶದವರು ಅಲ್ವಾ? ಕಳೆದ ಚುನಾವಣೆಯಲ್ಲಿ ಪೇಪರ್ ಪೆನ್ ಕೇಳಿದವರು ಇಂದು ಚರ್ಚೆ ಮಾಡಬೇಕು. ಇವರಿಗೆ ಅಧಿಕಾರ ಇದೆ, ಕ್ಯಾಬಿನೆಟ್ನಲ್ಲಿ ಸತ್ಯಾಂಶ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಹೇಳಿದರೆ ಕುಮಾರಸ್ವಾಮಿ ಚಡ್ಡಿನೂ ಹಾಕ್ತಾರೆ, ದತ್ತಮಾಲೆನೂ ಹಾಕ್ತಾರೆ ಎಂಬ ಚಲುವರಾಯಸ್ವಾಮಿ ಹೇಳಿಕೆ ವಿಚಾರಕ್ಕೆ ಕಿಡಿಕಾರಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಚಲುವರಾಯಸ್ವಾಮಿಯನ್ನ ಯಾರವರು ? ಸಿದ್ದರಾಮಯ್ಯ ಹೇಳಿದ್ರೆ ಅವರು ಏನು ಹಾಕಿಕೊಳ್ತಾರೆ. ಮೊದಲು ಅವರು ಏನು ಹಾಕ್ತಾರೆ ಎಂದು ಹೇಳಲಿ, ಅಮೇಲೆ ನಾನು ಏನು ಹಾಕ್ತೀನಿ ಎಂದು ಹೇಳ್ತೀನಿ ಎಂದರು.