ಮೈಸೂರು : ಭಾರತ ರಾಷ್ಟ್ರೀಯ ಕಾಂಗ್ರೆಸ್ಗೆ ಸೇವಾದಳ ಮೂಲ ಸಂಘಟನೆಯ ಬೇರು. ಹೀಗಾಗಿ ಕಾಂಗ್ರೆಸ್ ಭಾರತ ಸಂವಿಧಾನದ ಮೂಲ ಆಶಯಗಳಿಗೆ ಬದ್ಧವಾಗಿ ದೇಶ ಮುನ್ನಡೆದರೆ, ಬಿಜೆಪಿ ಮಾತ್ರ ಅದರ ವಿರುದ್ಧ ದಿಕ್ಕಿನಲ್ಲಿ ಸಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ತಿಳಿಸಿದರು.
ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ, ಸೇವಾದಳದ ವತಿಯಿಂದ ನಗರದ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾ ದಳದ ನಿಕಟಪೂರ್ವ ಅಧ್ಯಕ್ಷೆ ಪ್ಯಾರಿ ಜಾನ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
1923ರಲ್ಲಿ ಸ್ಥಾಪನೆಯಾದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸೇವಾದಳ ತ್ಯಾಗ, ಬಲಿದಾನ, ಜಾತ್ಯತೀತತೆ, ಶಿಸ್ತು ಹಾಗೂ ಸಮಾನತೆಯ ಮೂಲ ಉದ್ದೇಶ ಹೊಂದಿದೆ. ಭಾರತ ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಕಾಂಗ್ರೆಸ್ ಸೇವಾದಳ ಪ್ರಮುಖ ಪಾತ್ರವಹಿಸಿ ಶಾಂತಿಯುತ ಹೋರಾಟಕ್ಕೆ ಮೂಲ ಪ್ರೇರಣೆಯಾಗಿತ್ತು. ಆದರೆ, 1925ರಲ್ಲಿ ಆರಂಭವಾದ ರಾಷ್ಟ್ರೀಯ ಸ್ವಯಂಸೇವಾ ಸಂಘ ದೇಶದ ಉದ್ದಗಲಕ್ಕೂ ಹಿಂದೂ ರಾಷ್ಟ್ರದ ನಿರ್ಮಾಣಕ್ಕೆ, ಅದನ್ನು ಅತ್ಯಂತ ಸಮರ್ಥವಾಗಿ ಉತ್ತೇಜಿಸುವ ಬಹುದೊಡ್ಡ ಮೂಲ ಉದ್ದೇಶ ಹೊಂದಿತ್ತು ಎಂದರು.
ಮುಂದುವರೆದು, ರಾಜ್ಯ ಕಾಂಗ್ರೆಸ್ ಸೇವಾ ದಳದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪ್ಯಾರಿಜಾನ್, ದಕ್ಷಿಣ ಭಾರತದಲ್ಲಿ ಸುಮಾರು 40 ವರ್ಷಗಳ ಕಾಲ ಕಾಂಗ್ರೆಸ್ ಸೇವಾ ದಳದಲ್ಲಿ ಅತ್ಯಂತ ಯಶಸ್ವಿ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕಾಂಗ್ರೆಸ್ ಸೇವಾ ದಳದ ಶಿಸ್ತು ಮತ್ತು ಬದ್ಧತೆ ದೇಶದ ರಾಜಕೀಯ ಪಕ್ಷಗಳಿಗೆ ಒಂದು ದೊಡ್ಡ ಮಾದರಿ. ಕಾಂಗ್ರೆಸ್ ಸೇವಾದಳದಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸಿದ ಪದಾಧಿಕಾರಿಗಳಿಗೆ ಪಕ್ಷ ಹೊಸ ಮೀಸಲಾತಿ ಆಧಾರದಲ್ಲಿ ಅಂತಹ ಹಿರಿಯ ಸಮರ್ಥ ಪದಾಧಿಕಾರಿಗಳಿಗೆ ಸರ್ಕಾರದಲ್ಲಿ ಉನ್ನತ ಸ್ಥಾನ ನೀಡುವುದು ತುರ್ತು ಅನಿವಾರ್ಯ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ಯಾರಿಜಾನ್, ನಾನು ಮೈಸೂರಿನ ಮಗಳು, ರಾಷ್ಟ್ರದ ಉದ್ದಗಲಕ್ಕೂ ಕಾಂಗ್ರೆಸ್ ಸೇವಾ ದಳದಲ್ಲಿ ಸೇವೆ ಸಲ್ಲಿಸಿದ ನನಗೆ ಈ ಗೌರವ ಹೆಚ್ಚು ಹೆಮ್ಮೆ ತರಿಸಿದೆ. ಹಾಗೆಯೇ ಈ ಗೌರವಕ್ಕೆ ಕಾಂಗ್ರೆಸ್ ಸೇವಾ ದಳವೇ ಕಾರಣ. ಕಾಂಗ್ರೆಸ್ ಸೇವಾ ದಳದಲ್ಲಿ ಕೆಲಸ ಮಾಡಿದ ಕಾರಣದಿಂದಾಗಿ ನಾನು ಬೌದ್ಧಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ಗಟ್ಟಿಯಾಗಿ ಪ್ರಾಮಾಣಿಕವಾಗಿ ಜೀವನ ನಡೆಸುತ್ತಿದ್ದೇನೆ ಎಂದರು.
ಬಳಿಕ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ ಮಾತನಾಡಿ, ಪ್ಯಾರಿಜಾನ್ ಅವರು ಜಪಾನ್ ದೇಶದಲ್ಲಿ ಇದೇ ತಿಂಗಳು 26ರಂದು ನಡೆಯಲಿರುವ ವಿಶ್ವ ಯುವ ಸಮ್ಮೇಳದಲ್ಲಿ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಇದು ದೇಶಕ್ಕೆ ಮಾದರಿ ಎಂದರು.
ಸಮಾರಂಭದಲ್ಲಿ ಮಾಜಿ ಮೇಯರ್ಗಳಾದ ಚಿಕ್ಕಣ್ಣ, ಮೋದಾಮಣಿ, ಸೇವಾ ದಳದ ಜಿಲ್ಲಾಧ್ಯಕ್ಷ ಶಾಮ, ಯೋಗೀಶ್, ನಗರ ಸೇವಾ ದಳದ ಅಧ್ಯಕ್ಷ ಅಶೋಕ್, ಕಾರ್ಯಾಧ್ಯಕ್ಷ ಮೋಹನ್, ಪದಾಧಿಕಾರಿಗಳಾದ ಈಶ್ವರ್ ಚೆಕ್ಕಡಿ, ಮಂಚೇಗೌಡನ ಕೊಪ್ಪಲು ರವಿ, ವೆಂಕಟಸುಬ್ಬಯ್ಯ, ಗೋಪಿನಾಥ್, ಸೋಮಶೇಖರ್, ಡೈರಿ ವೆಂಕಟೇಶ್, ರಾಮಚಂದ್ರು ಶಿವಶಂಕರಮೂರ್ತಿ, ರಾಮು, ರಾಜು, ಮುರುಡೇಶ್, ಮಹದೇವ್, ಆರ್.ಹೆಚ್.ಕುಮಾರ, ಲಲಿತಾ ಸೇರಿದಂತೆ ಹಲವರು ಇದ್ದರು.



