ಬೆಂಗಳೂರು: ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರನ್ನು ‘ಪಾಕಿಸ್ತಾನಿ’ ಎಂದು ನಿಂದಿಸಿರುವ ಎನ್. ರವಿಕುಮಾರ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ‘ನಾಯಿ’ಗೆ ಹೋಲಿಸಿದ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ವಿಧಾನಪರಿಷತ್ತಿನ ಸದಸ್ಯರ ನಿಯೋಗ ಗುರುವಾರ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ.
ವಿಧಾನಪರಿಷತ್ ಆಡಳಿತ ಪಕ್ಷದ ನಾಯಕ ಎನ್.ಎಸ್. ಭೋಸರಾಜು ಮತ್ತು ಮುಖ್ಯ ಸಚೇತಕ ಸಲೀಂ ಅಹ್ಮದ್ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ಎನ್. ರವಿಕುಮಾರ್ ಹಾಗೂ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿತು.
ಭೋಸರಾಜು ಮಾತನಾಡುತ್ತಾ, “ಸಂವಿಧಾನ ವಿರೋಧಿಯಾಗಿ ಬೀದಿಯಲ್ಲಿ ಟೀಕೆ ಮಾಡುವುದು ಪ್ರಜಾಪ್ರಭುತ್ವಕ್ಕೆ ಧಕ್ಕೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಹೇಳುವ ಬಿಜೆಪಿ ಸದಸ್ಯರು ಸಮಾಜವನ್ನು ವಿಭಜಿಸುತ್ತಿದ್ದಾರೆ. ದಲಿತ ಸಮುದಾಯ ಹಾಗೂ ಅಧಿಕಾರಿಗಳಿಗೆ ಅವಮಾನಕಾರಿ ಪದ ಬಳಸಿರುವವರನ್ನು ಉಚ್ಚಾಟನೆ ಮಾಡಬೇಕು,” ಎಂದು ಒತ್ತಾಯಿಸಿದರು.
ಸಚೇತಕ ಸಲೀಂ ಅಹ್ಮದ್ ತಿಳಿಸಿದಂತೆ, ಎರಡು ಬೇರೆ ಬೇರೆ ದೂರುಗಳನ್ನು ಸಲ್ಲಿಸಿದ್ದು, ಇವರಿಬ್ಬರೂ ಸಮಾಜದಲ್ಲಿ ತಪ್ಪು ಸಂದೇಶ ಹರಡುತ್ತಿದ್ದಾರೆ. ಪ್ರಕರಣ ಪರಿಶೀಲನೆಗೆ ರಾಜ್ಯಪಾಲರು ಭರವಸೆ ನೀಡಿದ್ದಾರೆ.
ನಿಯೋಗದಲ್ಲಿ ವಿಧಾನಪರಿಷತ್ ಸದಸ್ಯರುಗಳಾದ ವಸಂತ್ಕುಮಾರ್, ಅನಿಲ್ ಕುಮಾರ್ ಎಂ.ಎಲ್., ಜಗದೇವ ಗುತ್ತೇದಾರ್, ಎಸ್.ರವಿ, ಡಿ.ಟಿ.ಶ್ರೀನಿವಾಸ್, ದಿನೇಶ್ ಗೂಳಿಗೌಡ್, ಚನ್ನರಾಜ್ ಹಟ್ಟಿಹೊಳಿ, ಬಸವನಗೌಡ ಬಾದರ್ಲಿ, ಪುಟ್ಟಣ್ಣ, ನಸೀರ್ ಅಹ್ಮದ್, ಗೋವಿಂದರಾಜು, ನಾಗರಾಜ್ ಯಾದವ್, ಮಂಜುನಾಥ್ ಭಂಡಾರಿ ನಿಯೋಗದಲ್ಲಿ ಉಪಸ್ಥಿತರಿದ್ದರು.