ಮಂಡ್ಯ: ಮಂಡ್ಯ ಜಿಲ್ಲೆಯ ಹೃದಯಸ್ಥಳವಾದ ಕೃಷ್ಣರಾಜಸಾಗರ (ಕೆಆರ್ಎಸ್) ಅಣೆಕಟ್ಟಿನ ಬಳಿ ನಿರ್ಮಿಸಲು ಸರ್ಕಾರ ಯೋಜಿಸಿರುವ ಅಮ್ಯೂಸ್ಮೆಂಟ್ ಪಾರ್ಕ್ಗೆ ಸಾಮಾಜಿಕ ಹಾಗೂ ರಾಜಕೀಯ ವಿರೋಧ ಜೋರಾಗುತ್ತಲೇ ಇದೆ. ಇದೀಗ ಮಾಜಿ ಸಂಸದೆ ಸುಮಲತಾ ಅಂಬರೀಶ್ ಕೂಡ ತಮ್ಮ ಧ್ವನಿಯನ್ನು ಸೇರಿಸಿ, ಯೋಜನೆಯ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾದ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಸುಮಲತಾ, “ಕೆಆರ್ಎಸ್ ಅಣೆಕಟ್ಟು ಕೇವಲ ಒಂದು ಜಲಾನಯನ ಯೋಜನೆ ಅಲ್ಲ. ಇದು ಶತಮಾನಗಳ ಇತಿಹಾಸ, ಸಂಸ್ಕೃತಿ ಮತ್ತು ಮಂಡ್ಯದ ಜನರ ಜೀವನಾಡಿಯಾಗಿದೆ” ಎಂಬ ಸಂಕೇತಬದ್ಧ ಸಂದೇಶವನ್ನು ನೀಡಿದ್ದಾರೆ. ಅವರು ಸರ್ಕಾರದ ನಿಲುವು ಖಂಡಿಸಿ, ಈ ಯೋಜನೆಯಿಂದ ಸ್ಥಳದ ಪಾವಿತ್ರ್ಯತೆ ಮತ್ತು ಪರಿಸರ ಸಮತೋಲನ ಕದಡುವ ಸಾಧ್ಯತೆಗಳ ಬಗ್ಗೆ ಎಚ್ಚರಿಕೆ ನೀಡಿದರು.
ನಮ್ಮ ಮಂಡ್ಯದ ಅಭಿವೃದ್ಧಿಗೆ ಆದ್ಯತೆ ನೀಡುವ ಬದಲು ಇಂತಹ ದುಂದು ವೆಚ್ಚಕ್ಕೆ ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಈ ಯೋಜನೆಯ ವಿರೋಧಕ್ಕೆ ನನ್ನ ಬೆಂಬಲ ಸೂಚಿಸುತ್ತಿದ್ದೇನೆ. ಶತಮಾನಗಳ ಇತಿಹಾಸವಿರುವ ಕನ್ನಂಬಾಡಿ ಕಟ್ಟೆಯ ಅಸ್ಥಿತ್ವಕ್ಕೆ ಧಕ್ಕೆ ತರುವ ಯಾವುದೇ ಯೋಜನೆಯನ್ನು ಜಾರಿಗೆ ತರಲು ಸ್ವಾಭಿಮಾನಿ ಮಂಡ್ಯದ ಜನತೆ ಅವಕಾಶ ಕೊಡಲಾರೆವು ಎಂದು ಸರ್ಕಾರಕ್ಕೆ ಮಾಜಿ ಸಂಸದೆ ಎಚ್ಚರಿಕೆ ನೀಡಿದ್ದಾರೆ.
ಕೆಆರ್ಎಸ್ ಬಳಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಸರ್ಕಾರದ ನಡೆಗೆ ಮಂಡ್ಯ ಜನತೆ ಹಾಗೂ ರೈತ ಸಂಘಟನೆಗಳು ಖಂಡನೆ ವ್ಯಕ್ತಪಡಿಸಿದೆ. ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ವಿರೋಧ ವ್ಯಕ್ತಪಡಿಸಿದ್ದರು.