ಮಂಡ್ಯ: ಬಜೆಟ್ ನಲ್ಲಿ ಹೊಸ ಮೈಷುಗರ್ ಕಾರ್ಖಾನೆ ನಿರ್ಮಾಣಕ್ಕೆ ಘೋಷಣೆ ಹಿನ್ನಲೆ ಸಿಎಂ ಸಿದ್ದರಾಮಯ್ಯಗೆ ಶಾಸಕ ಗಣಿಗ ರವಿಕುಮಾರ್ ಧನ್ಯವಾದ ತಿಳಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗಣಿಗ ರವಿಕುಮಾರ್, ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದ್ದು, ಸಾತನೂರು ಫಾರಂ ನಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣವಾಗಲಿದೆ. ಹಳೆ ಮೈಷುಗರ್ ಕಾರ್ಖಾನೆ ಜಾಗದಲ್ಲಿ ಸಾಫ್ಟ್ವೇರ್ ಪಾರ್ಕ್ ನಿರ್ಮಾಣವಾಗಲಿದೆ.
ಸಕ್ಕರೆ ಕಾರ್ಖಾನೆಯಿಂದ ಮಂಡ್ಯ ರೈತರಿಗೆ ಬೆಳಕು ಸಿಗಲಿದೆ. ಮಂಡ್ಯದ ರಾಮಮಂದಿರ ಅಂದ್ರೆ ಅದು ಸಕ್ಕರೆ ಕಾರ್ಖಾನೆ. ಅಯೋಧ್ಯೆ ರಾಮ ಮಂದಿರದಷ್ಟೆ ಪವಿತ್ರವಾದುದು ಮೈಷುಗರ್ ಕಾರ್ಖಾನೆ. ಕಾಶಿ ವಿಶ್ವನಾಥನಷ್ಟೆ ಪವಿತ್ರವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಮ್ಮ ರೈತರಿಗೆ ಕೊಟ್ಟಂತಹ ದೊಡ್ಡ ಕೊಡುಗೆ. 100 ವರ್ಷಗಳ ಇತಿಹಾಸ ಇರುವಂತಹ ಕಾರ್ಖಾನೆ ಇದಾಗಿದೆ.
75 ಕೋಟಿ ಕೊಟ್ಟು ಷುಗರ್ ಕಾರ್ಖಾನೆ ಪುನಾರಂಭವಾಗಿದೆ. ನೆನ್ನೆಯ ಬಜೆಟ್ ನಲ್ಲಿ ಹೊಸ ಮೈಷುಗರ್ ಕಾರ್ಖಾನೆಗೆ ಘೋಷಣೆ ಮಾಡಿದ್ದಾರೆ. ಶೀಘ್ರದಲ್ಲೇ ಹೊಸ ಕಾರ್ಖಾನೆಯ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದರು.
100ಕೋಟಿ ಸರ್ಕಾರದಿಂದ ನೀಡಲಾಗ್ತಿದೆ, ಉಳಿದ 400 ಕೋಟಿ ಸಾಲದ ರೂಪದಲ್ಲಿ ಕೊಡ್ತಾರೆ. ಈಗಿರುವ ಕಾರ್ಖಾನೆ ಜಾಗದಲ್ಲಿ ಸಾಫ್ಟ್ ವೇರ್ ಪಾರ್ಕ್ ನಿರ್ಮಾಣ ಮಾಡಿ, ಸಾಫ್ಟ್ ವೇರ್ ಕಂಪನಿ ತಂದು ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಮಂಡ್ಯ ಚಿತ್ರಣ ಮೂರ್ನಾಲ್ಕು ತಿಂಗಳಲ್ಲಿ ಬದಲಾಗುತ್ತೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತಿ ಮನೆಯಿಂದ ಮಣ್ಣು ಸಂಗ್ರಹಿಸಿ ಹೊಸ ಕಾರ್ಖಾನೆ ನಿರ್ಮಾಣ ಮಾಡಲಾಗುವುದು. ನಮ್ಮ ಮಣ್ಣಿನಿಂದ ಕಟ್ಟಿರುವ ಭಾವನೆ ಎಲ್ಲರಲ್ಲೂ ಇರಬೇಕು ಎಂದು ಹೇಳಿದರು.
ನಮ್ಮದು ಜೆಡಿಎಸ್ ಸರ್ಕಾರ ಅಲ್ಲ, ಕುಮಾರಸ್ವಾಮಿ ಸರ್ಕಾರದಲ್ಲಿ 100ಕೋಟಿ ಘೋಷಣೆ ಮಾಡಿದ್ರು ಅದು ಆಗಿಲ್ಲ. ನಾವು ನುಡಿದಂತೆ ನಡೆಯುತ್ತೇವೆ ಶೀಘ್ರವಾಗಿ ಕಾರ್ಖಾನೆ ನಿರ್ಮಾಣ ಮಾಡಲಾಗುತ್ತದೆ ಎಂದು ಶಾಸಕ ಗಣಿಗ ರವಿಕುಮಾರ್ ತಿಳಿಸಿದರು.