ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣದ ಭ್ರಷ್ಟಾಚಾರ ಆರೋಪದಲ್ಲಿ ಸಿಬಿಐನಿಂದ ಬಂಧನವಾಗಿರುವ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ದಿಲ್ಲಿ ನ್ಯಾಯಾಲಯ ಬುಧವಾರ 3 ದಿನಗಳ ಅವಧಿಗೆ ಸಿಬಿಐ ವಶಕ್ಕೊಪ್ಪಿಸಿದೆ.
ಪ್ರಕರಣ ಸಂಬಂಧಿಸಿದಂತೆ ತಿಹಾರ್ ಜೈಲಿನಿಂದಲೇ ಮಂಗಳವಾರ ಕೇಜ್ರಿವಾಲ್ರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬುಧವಾರ ಅವರನ್ನು ಬಂಧಿಸಿ ದಿಲ್ಲಿಯ ರೋಸ್ ಅವೆನ್ಯೂ ಕೋರ್ಟ್ನ ನ್ಯಾ| ಅಮಿತಾಭ್ ರಾವತ್ ಅವರ ಎದುರು ಹಾಜರುಪಡಿಸಿ, 5 ದಿನಗಳ ಕಸ್ಟಡಿಗೆ ಕೋರಿದ್ದರು. ಆದರೆ ನ್ಯಾಯಾಧೀಶರು ಕೇವಲ 3 ದಿನಗಳ ಕಸ್ಟಡಿಗೆ ಸಮ್ಮತಿಸಿದ್ದು, ಜೂ.29ರ ಸಂಜೆ 7 ಗಂಟೆಯ ಒಳಗೆ ಮತ್ತೆ ಕೇಜ್ರಿವಾಲ್ರನ್ನು ಕೋರ್ಟ್ ಮುಂದೆ ಹಾಜರು ಪಡಿಸುವಂತೆ ಸೂಚಿಸಿದ್ದಾರೆ.
ನಾನು, ಮನೀಷ್ ನಿರಪರಾಧಿಗಳು: ಪ್ರಸ್ತುತ ಪ್ರಕರಣದಲ್ಲಿ ಮಾಜಿ ಡಿಸಿಎಂ ಮನೀಷ್ ಸಿಸೋಡಿಯಾ ಅವರೇ ತಪ್ಪಿತಸ್ಥರೆಂದು ನಾನು ಹೇಳಿಕೆ ನೀಡಿರುವುದಾಗಿ ಕೆಲವು ಮಾಧ್ಯಮ ವರದಿ ಮಾಡಿವೆ. ಆದರೆ ಅಂಥ ಯಾವ ಹೇಳಿಕೆಯನ್ನೂ ನಾನು ನೀಡಿಲ್ಲ. ನಾನು, ಸಿಸೋಡಿಯಾ, ಆಪ್ ನಿರಪರಾಧಿಗಳು ಎಂದು ಕೇಜ್ರಿವಾಲ್ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ.