ಬೆಂಗಳೂರು : ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಐಪಿಎಲ್ 2026ರ 11ನೇ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಈ ಕಾದಾಟವು ಕೇವಲ ಪಂದ್ಯವಲ್ಲ, ಅದೊಂದು ಭಾವನೆಯಾಗಿದೆ. ಆದರೆ ಈ ಬಾರಿಯ ಪಂದ್ಯಕ್ಕೂ ಮೊದಲು ಅಭಿಮಾನಿಗಳಿಗೆ ನಿರಾಸೆಯಾಗಿದೆ. ನಿರಾಸೆಗೆ ಕಾರಣವಿಷ್ಟೇ. ಗಾಯದ ಸಮಸ್ಯೆ ಮತ್ತು ವೈಯುಕ್ತಿಕ ಕಾರಣಗಳಿಂದಾಗಿ ಎರಡೂ ತಂಡಗಳ ಒಟ್ಟು 6 ಪ್ರಮುಖ ಆಟಗಾರರು ಈ ಪಂದ್ಯದಿಂದ ಹೊರಗುಳಿಯುವುದು ಬಹುತೇಕ ಪಕ್ಕಾ ಆಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಪಾಲಿನ ಅಚ್ಚುಮೆಚ್ಚಿನ ಆಟಗಾರ ಮಹೇಂದ್ರ ಸಿಂಗ್ ಧೋನಿ ಈ ಪಂದ್ಯದಲ್ಲಿ ಕಣಕ್ಕಿಳಿಯುವುದೇ ಅನುಮಾನ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ ಧೋನಿ ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವಿಶ್ರಾಂತಿ ಪಡೆಯಲಿದ್ದಾರೆ. ಧೋನಿ ಇಲ್ಲದ ಸಿಎಸ್ ಕೆ ಪಂದ್ಯ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರಾಸೆಯಾಗಲಿದೆ.
ಸಿಎಸ್ ಕೆ ತಂಡದ ಮತ್ತೊಬ್ಬ ಆಟಗಾರ, ಆಸ್ಟ್ರೇಲಿಯಾದ ಆಲ್ ರೌಂಡರ್ ಮ್ಯಾಥ್ಯೂ ಶಾರ್ಟ್ ಹೆಬ್ಬೆರಳು ಮುರಿದಿದ್ದು, ಅವರೂ ಸಹ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಸೈಡ್ ಸ್ಟ್ರೈನ್ ಸಮಸ್ಯೆಯಿಂದ ಆರ್ ಸಿಬಿ ವಿರುದ್ಧದ ಪಂದ್ಯಕ್ಕೆ ಲಭ್ಯವಿಲ್ಲ ಎನ್ನಲಾಗುತ್ತಿದೆ.
ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಕೂಡ ಆಟಗಾರರ ಅಲಭ್ಯತೆ ತಲೆನೋವಾಗಿ ಪರಿಣಮಿಸಿದೆ. ಆಸೀಸ್ ವೇಗಿ ಜೋಶ್ ಹ್ಯಾಜಲ್ವುಡ್ ಕಾಲು ನೋವಿನ ಸಮಸ್ಯೆಯಿಂದ ಇನ್ನೂ ಸಂಪೂರ್ಣ ಗುಣಮುಖರಾಗಿಲ್ಲ. ಶನಿವಾರ ನಡೆದ ಅಭ್ಯಾಸ ಅವಧಿಯಲ್ಲೂ ಅವರು ಬೌಲಿಂಗ್ ಮಾಡದ ಕಾರಣ, ಸಿಎಸ್ ಕೆ ವಿರುದ್ಧ ಅವರು ಆಡುವುದೇ ಅನುಮಾನ.
ವೇಗಿ ಯಶ್ ದಯಾಳ್ ವೈಯಕ್ತಿಕ ಕಾರಣದಿಂದ ಸಂಪೂರ್ಣ ಐಪಿಎಲ್ ಆವೃತ್ತಿಯಿಂದಲೇ ಹೊರಗುಳಿದಿದ್ದಾರೆ. ಇದು ಬೆಂಗಳೂರು ತಂಡದ ದೇಶೀಯ ಬೌಲಿಂಗ್ ವಿಭಾಗಕ್ಕೆ ದೊಡ್ಡ ನಷ್ಟ. ಇವರ ಜೊತೆಗೆ ಶ್ರೀಲಂಕಾದ ವೇಗಿ ನುವಾನ್ ತುಷಾರ ಕೂಡ ತಂಡವನ್ನು ಸೇರಿಕೊಂಡಿಲ್ಲ. ಫಿಟ್ ನೆಸ್ ಸಮಸ್ಯೆಯ ಕಾರಣ ಶ್ರೀಲಂಕಾ ಕ್ರಿಕೆಟ್ ಮಂಡಳಿ ಅವರಿಗೆ ಎನ್ ಒಸಿ ನೀಡಿಲ್ಲ. ಆದರೂ ಪಂದ್ಯ ರೋಚಕೆತೆಯನ್ನು ಕಳೆದುಕೊಳ್ಳಲ್ಲ ಎಂಬ ನೀರೀಕ್ಷೆ ಅಭಿಮಾನಿಗಳದ್ದು.



