ಪಾಂಡವಪುರ: ರೈತ ಸಂಘಟನೆಯ ತೀವ್ರ ವಿರೋಧದ ನಡುವೆಯೂ ಜಿಲ್ಲಾಡಳಿತ ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದ ಗಣಿ ಪ್ರದೇಶದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಪರೀಕ್ಷಾರ್ಥ ಸ್ಫೋಟದ ಸಿದ್ಧತೆಗೆ ಕುಳಿ ಕೊರೆಯುವ (ಡ್ರಿಲ್ಲಿಂಗ್) ಕಾರ್ಯವನ್ನು ಆರಂಭಿಸಿತು.
ನ್ಯಾಯಾಲಯದ ಆದೇಶ ಬರುವವರೆಗೆ ಟ್ರಯಲ್ ಬ್ಲಾಸ್ಟ್ ನಡೆಸುವುದಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ಪ್ರತಿಭಟನಾನಿರತ ರೈತರಿಗೆ ಭರವಸೆ ನೀಡಿದ್ದರು. ಆದರೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸದ್ದಿಲ್ಲದೆ ಬೇಬಿಬೆಟ್ಟದಲ್ಲಿ ಯಂತ್ರದ ಮೂಲಕ ಡ್ರಿಲ್ಲಿಂಗ್ ಕಾರ್ಯ ನಡೆಸಿದರು.
ವಿಷಯ ತಿಳಿಯುತ್ತಿದ್ದಂತೆ ರೈತ ಸಂಘದ ನೂರಾರು ಕಾರ್ಯಕರ್ತರು ಬಡಗಲಪುರ ನಾಗೇಂದ್ರ ಮತ್ತು ಎ.ಎಲ್. ಕೆಂಪೂಗೌಡ ನೇತೃತ್ವದಲ್ಲಿ ಕೆ.ಆರ್.ಎಸ್. ಬೃಂದಾವನ ಗೇಟ್ ಸಮೀಪ ಜಮಾಯಿಸಿ ಪ್ರತಿಭಟನೆ ನಡೆಸಿದರು. ಇನ್ನೊಂದೆಡೆ ಸತ್ಯಾಂಶ ತಿಳಿಯಲು ಪರೀಕ್ಷಾರ್ಥ ಸ್ಫೋಟ ನಡೆಸಬೇಕು ಎಂದು ಮತ್ತೊಂದು ರೈತ ಬಣದವರು ಆಗ್ರಹಿಸಿದರು. ಇದಕ್ಕೆ ಕಲ್ಲುಗಣಿ ಮಾಲೀಕರು, ಗಣಿ ಕಾರ್ಮಿಕರು, ನೂರಾರು ಟಿಪ್ಪರ್, ಟ್ರಾಕ್ಟರ್ ಮತ್ತು ಲಾರಿ ಚಾಲಕರು ಬೆಂಬಲ ಸೂಚಿಸಿದರು. ಪರ-ವಿರೋಧದ ಅಲೆಯಿಂದ ಗೊಂದಲಮಯ ವಾತಾವರಣ ಸೃಷ್ಟಿಯಾಯಿತು.
ಹೈಕೋರ್ಟ್ ಆದೇಶದಂತೆ ಬೇಬಿ ಬೆಟ್ಟದ ಗಣಿಗಾರಿಕೆ ಪ್ರದೇಶದಲ್ಲಿ ಸರಾಸರಿ ೬೦ ಅಡಿ ಆಳದಲ್ಲಿ ೫ ಕಡೆ ಕುಳಿ ಕೊರೆಯುತ್ತಿದ್ದೇವೆ. ಈ ಕಾರ್ಯ ಮುಗಿದ ಮೇಲೆ ಪುಣೆ ಮತ್ತು ಜಾರ್ಖಂಡ್ ಮೂಲಕ ಗಣಿ ತಜ್ಞರು ಪರೀಕ್ಷಾರ್ಥ ಸ್ಫೋಟ ನಡೆಸಲಿದ್ದಾರೆ ಎಂದು ಹಿರಿಯ ಭೂವಿಜ್ಞಾನಿ ರೇಷ್ಮಾ ತಿಳಿಸಿದರು.