ವರದಿ ಎಡತೊರೆ ಮಹೇಶ್
ಎಚ್.ಡಿ. ಕೋಟೆ : ಹವಾಮಾನ ಬದಲಾವಣೆಯಿಂದಾಗಿ ಈ ಭಾರಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗುತ್ತಿದ್ದು ಇದಕ್ಕೆ ಸರ್ಕಾರ ನಿಧಿಯನ್ನು ಸ್ಥಾಪನೆ ಮಾಡಬೇಕು ಎಂದು ಪೀಪಲ್ ಟ್ರೀ ಕೃಷಿ ಸಂಶೋಧಕ ಎಲ್.ಸಿ. ಚನ್ನರಾಜು ಒತ್ತಾಯಿಸಿದರು.
ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಳೆದ 10 ವರ್ಷಗಳಿಗೆ ಹೋಲಿಸಿದರೆ ಇತ್ತೀಚ್ಚಿನ ದಿನಗಳಲ್ಲಿ ಮಳೆ ಬರುವ ಪ್ರಮಾಣದಲ್ಲಿ ಮತ್ತು ದಿನಗಳಲ್ಲಿ ಏರೂಪೇರಾಗಿದೆ. ಆದರೆ ನಮ್ಮ ರೈತರು ಹಿಂದಿನ ವರ್ಷಗಳಲ್ಲಿನ ಬರುತ್ತಿದ್ದ ಮಳೆಗನುಗುಣವಾಗಿಯೇ ಈಗಿನ ಮಳೆಗೂ ಬೇಸಾಯ ಕ್ರಮ ಮುಂದುವರಿಸಿಕೊಂಡು ಬರಲಾಗುತ್ತಿದ್ದು ಇದರಿಂದಾಗಿ ಬೆಳೆ ಹಾನಿಸಂಭವಿಸುತ್ತಿದೆ ಎಂದು ಅವರು ತಿಳಿಸಿದರು.
ಈಗಿನ ಮಳೆಗೆ ಅನುಗುಣವಾಗಿ ಬೇಸಾಯ ಕ್ರಮ ಅನುಸರಿಸುವ ತರಭೇತಿಯನ್ನು ನೀಡಬೇಕು, ಮತ್ತು ಹವಾಮಾನ ಬದಲಾವಣೆಯಿಂದ ಆಗುವ ನಷ್ಟವನ್ನು ಈ ನಿಧಿಯಿಂದ ನೀಡಬೇಕು ಎಂದು ಒತ್ತಾಯಿಸಿದರು.
ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಂಡು ಬೆಳೆಯುವ ಕಡಿಮೆ ಕಾಲಾವಧಿಯ ಸಿರಿಧಾನ್ಯಗಳಾದ ಸಾಮೆ, ನವಣೆ, ಸಜ್ಜೆ, ಬರಗು ಇವುಗಳಿಗೆ ವೈಜ್ಞಾನಿಕ ಬೆಂಬಲ ಬೆಲೆಯನ್ನು ಕೊಡಬೇಕು.
ಅಲ್ಲದೆ ಕಿರು ಧಾನ್ಯಗಳಾದ ನವಣೆ, ಸಾಮೆ, ಬರಗು ಇವುಗಳ ಒಟ್ಟು ತೆಗೆಯಲು ಹೋಬಳಿ ಮಟ್ಟದಲ್ಲಿ ಸಂಸ್ಕರಣ ಯಂತ್ರಗಳನ್ನ ಸ್ಥಾಪಿಸಬೇಕು, ಸಿರಿಧಾನ್ಯ ಬೆಳೆಯುವ ರೈತರಿಂದ ಸಿರಿಧಾನ್ಯಗಳನ್ನು ಸಂಗ್ರಹಣೆ ಮಾಡಿ ಸಂಸ್ಕರಿಸಿ ಸಾರ್ವಜನಿಕ ವಿತರಣೆ ವ್ಯವಸ್ಥೆ (ಪಿಡಿಎಸ್) ಮೂಲಕ ವಿತರಿಸುವುದರಿಂದ ಸಿರಿಧಾನ್ಯ ಬೆಳೆಯುವ ರೈತರಿಗೆ ಮಾರುಕಟ್ಟೆ ರೂಪಿಸಿದಂತಾಗುತ್ತದೆ, ಸರ್ಕಾರದ ಅಡಿಯಲ್ಲಿ ನಡೆಯುತ್ತಿರುವ ಎಲ್ಲಾ ಇಲಾಖೆಗಳ ಆಹಾರ ಪಟ್ಟಿಯಲ್ಲಿ ಅಂದರೆ ಅಂಗನವಾಡಿ ಮತ್ತು ಶಾಲೆಗಳಲ್ಲಿ ಸಿರಿಧಾನ್ಯಗಳನ್ನ ಸೇರ್ಪಡೆ ಮಾಡಬೇಕು, ರೈತರ ಒಡಗೂಡಿ ಸ್ಥಳೀಯ ತಳಿ ಸಂಪತ್ತನ್ನು ಸಂರಕ್ಷಣೆ ಮಾಡಬೇಕು, ಸಮುದಾಯ ಬೀಜ ಬ್ಯಾಂಕ್ ಅನ್ನು ಪ್ರೋತ್ಸಾಹಿಸಬೇಕು, ರೈತರನ್ನು ಬೀಜ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರುವಂತೆ ಬೀಜ ನಿಗಮ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಪ್ರೋತ್ಸಾಹಿಸಲು ಸ್ಥಳೀಯ ಸರ್ಕಾರಗಳಾದ ಗ್ರಾಮ ಪಂಚಾಯಿತಿಗಳಿಗೆ ವಿಶೇಷ ಅಧಿಕಾರವನ್ನು ನೀಡಿದಾಗ ರೈತರಿಗೆ ಅನುಕೂಲವಾಗಲಿದೆ ಎಂದರು. ಸಿರಿಧಾನ್ಯಗಳನ್ನು ಬೆಳೆದರೆ ಮಾರುಕಟ್ಟೆಯ ಕೊರತೆ ಇದೆ. ಸರ್ಕಾರ ಸಿರಿಧಾನ್ಯಗಳನ್ನು ಕೊಂಡುಕೊಳ್ಳುವ ವ್ಯವಸ್ಥೆ ಆಗಬೇಕಿದೆ ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಹೊನ್ನಮ್ಮನಕಟ್ಟೆ ಅಶ್ವಿನಿ, ಜಯಲಕ್ಷ್ಮಿ ನೂರಲಕುಪ್ಪೆ, ರೇಖಾ ಗುರಿಸ್ವಾಮಿ, ಕಟ್ಟೇಮನುಗನಹಳ್ಳಿ ವಿಜಯಲಕ್ಷ್ಮೀ, ಲೀಲಾವತಿ, ಸೋಗಹಳ್ಳಿ ಗೀತಾ, ನೂರಲಕುಪ್ಪೆ ಜಯಲಕ್ಷ್ಮೀ, ಪೀಪಲ್ ಟ್ರೀ ಸಂಸ್ಥೆಯ ಸಿಬ್ಬಂದಿಗಳಾದ ಜವರೇಗೌಡ, ಸುರೇಶ್, ಲತಾ, ಚನ್ನಬಸಪ್ಪ, ರವಿ ಇದ್ದರು.