ಶಿವಮೊಗ್ಗ: ಡಿ.ದೇವರಾಜ ಅರಸುರವರ 109 ನೇ ಜನ್ಮ ದಿನಾಚರಣೆ ಸಮಾರಂಭವನ್ನು ಆಗಸ್ಟ್ 20 ರಂದು ಜಿಲ್ಲೆಯಲ್ಲಿ ಆಚರಿಸಲಾಗುವುದು. ಜಯಂತಿಯು ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ನಡೆಯಲು ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಡಿ.ದೇವರಾಜ ಅರುಸುರವರ ಜನ್ಮ ದಿನಾಚರಣೆ ಸಮಾರಂಭದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ ಆಹ್ವಾನಿಸಲು ಸೂಚಿಸಿದ ಅವರು, ಡಿ.ದೇವರಾಜ ಅರಸು ಮತ್ತು ಶ್ರೀ ನಾರಾಯಣ ಗುರುರವರ ಜಯಂತಿಗಳು ಒಂದೇ ದಿನ ಇರುವ ಕಾರಣ ವಿವಿಧ ಸಂಘಟನೆಗಳು ತಮ್ಮ ಪೂರ್ವಭಾವಿ ಸಭೆ ಮುಗಿದ ಬಳಿಕೆ ಎಲ್ಲಿ ಮತ್ತು ಯಾವ ಸಮಯದಲ್ಲಿ ಜಯಂತಿಗಳನ್ನು ಆಚರಿಸಬೇಕೆಂದು ಸಲಹೆ ನೀಡುವಂತೆ ತಿಳಿಸಿದರು. ಹಾಗೂ ಮುಖಂಡರು ಉಲ್ಲೇಖಿಸಿದ ಉಪನ್ಯಾಸಕರಿಂದ ಅರಸುವರವ ಕುರಿತು ಉಪನ್ಯಾಸ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದರು.
ದಲಿತ ಸಂಘಟನೆ ಮತ್ತು ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಎಲ್ಲ ಇಲಾಖೆಗಳು ಮತ್ತು ವಿವಿಧ ಸಂಘ ಸಂಸ್ಥೆಳು, ಸಂಘಟನೆಗಳ ಸಹಯೋಗ ಮತ್ತು ಸಮನ್ವಯತೆಯಿಂದ ಅರಸುರವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಮನವಿ ಮಾಡಿದರು. ಡಿ.ದೇವರಾಜ ಅರಸುರವರು ಮತ್ತು ಶ್ರೀ ನಾರಾಯಣ ಗುರುರವರ ಜಯಂತಿಗಳು ಒಂದೇ ದಿನ ಇರುವ ಕಾರಣ ಒಂದೇ ವೇದಿಕೆಯಲ್ಲಿ ಎರಡು ಜಯಂತಿಗಳನ್ನು ಆಚರಿಸಬಹುದು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿಗಳು, ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಹಿಂದುಳಿದ ವರ್ಗಗಳಿಗಾಗಿ ಸೇವೆ ಸಲ್ಲಿಸಿದವರಿಗೆ ಸನ್ಮಾನ ಮಾಡಲಾಗುವುದು. ಹಾಗೂ ಒಂದೇ ವೇದಿಕೆಯನ್ನು ಅರಸು ಮತ್ತು ನಾರಾಯಣ ಗುರು ಜಯಂತಿ ಆಚರಣೆ ಮಾಡಿದರೆ ಸೂಕ್ತ. ಮಳೆ ಬೀಳುತ್ತಿರುವುದರಿಂದ ಮೆರವಣಿಗೆ ಕುರಿತು ನಂತರ ನಿರ್ಧಾರ ಮಾಡೋಣ ಎಂದ ಅವರು ಎಲ್ಲರೂ ಸೇರಿ ಜಯಂತಿಯನ್ನು ಯಶಸ್ವಿಯಾಗಿಸೋಣ. ಅದಕ್ಕೆ ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರಾದ ಬಿ.ರಾಜು, ಶ್ರೀಧರ್, ಎಸ್ ಪಿ ಶೇಷಾದ್ರಿ, ರಾಜ್ಕುಮಾರ್, ವೆಂಕಟೇಶ್, ಏಳುಕೋಟಿ, ಮೂರ್ತಿ, ಷಣ್ಮುಗಂ, ರವಿಕುಮಾರ್, ವಿಜಯಕುಮಾರ್, ಮಹಾಲಿಂಗಪ್ಪ, ಲೋಕೇಶ್, ಹನುಮಂತಪ್ಪ, ಚನ್ನವೀರಪ್ಪ, ಪ್ರಕಾಶ್ ಇತರರು ಹಾಜರಿದ್ದರು