ಚನ್ನಪಟ್ಟಣ : ‘ನಮ್ಮನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ದುರಹಂಕಾರದ ಮಾತುಗಳನ್ನಾಡುತ್ತಿದ್ದ ಡಿ.ಕೆ. ಸಹೋದರರಿಗೆ ಲೋಕಸಭಾ ಚುನಾವಣೆಯಲ್ಲಿ ನೀವೆಲ್ಲಾ ಸರಿಯಾಗಿಯೇ ಪಾಠ ಕಲಿಸಿದ್ದೀರಿ. ಇದೀಗ ಅವರ ವಕ್ರದೃಷ್ಟಿ ಚನ್ನಪಟ್ಟಣದ ಮೇಲೆ ಬಿದ್ದಿದೆ. ದುರಹಂಕಾರಿಗಳು ಮತ್ತು ದೌರ್ಜನ್ಯ ಮಾಡುವವರ ಬಗ್ಗೆ ಎಚ್ಚರಿಕೆ ಇರಲಿ’ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಮಾರಂಭದಲ್ಲಿ ಡಿ.ಕೆ.ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದರು. ‘ಕ್ಷೇತ್ರದ ಜನರನ್ನು ಬೆದರಿಸಿ ತಮ್ಮತ್ತ ಎಳೆದುಕೊಳ್ಳಲು ಸಹೋದರರಿಗೆ ಸಾಧ್ಯವಿಲ್ಲ. ಯಾಕೆಂದರೆ, ಇಲ್ಲಿಗೆ ಮಂಡ್ಯದ ಗಾಳಿಯೂ ಬೀಸುತ್ತಿದೆ. ಅಷ್ಟು ಸುಲಭವಾಗಿ ಇಲ್ಲಿನವರು ಬಗ್ಗುವವರಲ್ಲ’ ಎಂದರು.
‘ಕ್ಷೇತ್ರಕ್ಕೆ ಬರುವಾಗ ದಾರಿಯಲ್ಲಿ ಅಣ್ಣ–ತಮ್ಮನ ಭಾವಚಿತ್ರವಿರುವ ಬೋರ್ಡ್ ನೋಡಿದೆ. ಕ್ಷೇತ್ರವನ್ನೇನಾದರೂ ಅವರಿಗೆ ಬಿಟ್ಟರೆ, ನೀವು ತೊಂದರೆ ಅನುಭವಿಸುತ್ತೀರಿ. ಅವರಿಂದ ಕ್ಷೇತ್ರವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ, ನಿಮ್ಮೆಲ್ಲರದಾಗಿದೆ’ ಎಂದು ವೇದಿಕೆ ಮೇಲೆ ಕುಳಿತಿದ್ದ ಪಕ್ಷದ ಮುಖಂಡರತ್ತ ಕೈ ತೋರಿಸಿ ಹೇಳಿದರು.