ದಕ್ಷಿಣ ಕನ್ನಡ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮನೆಯ ಮೇಲಿನ ಗುಡ್ಡ ಕುಸಿದು ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ನಂದಾವರದಲ್ಲಿ ನಡೆದಿದೆ.
ಝರೀನಾ(46) ಮೃತ ಮಹಿಳೆ.
ಮನೆಯೊಳಗೆ ಸಿಲುಕಿದ್ದ ಯುವತಿಯನ್ನು ಬಂಟ್ವಾಳ ಅಗ್ನಿಶಾಮಕ ಅಧಿಕಾರಿಗಳು, ಪೊಲೀಸರು ಹಾಗೂ ಸ್ಥಳೀಯರು ಕಾರ್ಯಾಚರಣೆ ಮಾಡಿ ರಕ್ಷಿಸಿದ್ದಾರೆ.
ಗ್ರಾಮದ ಗುಂಪು ಮನೆಗಳ ಪೈಕಿ ಮಹಮ್ಮದ್ ಎಂಬುವರ ಮನೆ ಮೇಲೆ ಗುಡ್ಡ ಜರಿದು ಬಿದ್ದಿದೆ. ಮನೆಯ ಒಳಗಿದ್ದ ಮಹಮ್ಮದ್ ಅವರ ಪತ್ನಿ ಝರಿನಾ ಮತ್ತು ಅವರ ಪುತ್ರಿ ಶಫಾ (20) ಸಿಕ್ಕಿಕೊಂಡಿದ್ದರು. ಝರೀನಾ ಅವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವಿಗೀಡಾಗಿದ್ದಾರೆ.
ಶಫಾ ಅವರನ್ನು ಕೂಡಲೇ ಊರ ಜನರು ಹೊರತೆ ತೆಗೆದಿದ್ದು, ಅವರಿಗೆ ಗಂಭೀರ ಗಾಯಗಳಾಗಿಲ್ಲ.
ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಭೇಟಿ ನೀಡಿದ್ದಾರೆ.