ಚಿತ್ರದುರ್ಗ: ನಟ ದರ್ಶನ್ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಅವರನ್ನು ನಾವು ಭೇಟಿಯಾಗಿಲ್ಲ, ಅವರಿಂದ ಹಣ ಪಡೆದಿಲ್ಲ, ಅವರೂ ನಮ್ಮ ಬಳಿ ಬಂದಿಲ್ಲ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸುದ್ದಿಗಳು ಹರಿದಾಡುತ್ತಿರುವುದು ನಮಗೆ ನೋವಾಗಿದೆ ಎಂದು ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡರ್ ಬೇಸರ ವ್ಯಕ್ತಪಡಿಸಿದ್ದಾರೆ.
ರೇಣುಕಸ್ವಾಮಿ ಕುಟುಂಬ ಸದಸ್ಯರಿಗೆ ದರ್ಶನ್ ಕೋಟ್ಯಂತರ ರೂಪಾಯಿ ಹಣ ಕೊಟ್ಟಿದ್ದಾರೆ, ಹೊಸ ಕಾರು ಖರೀದಿ ಮಾಡುತ್ತಿದ್ದಾರೆ ಎಂಬೆಲ್ಲಾ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ನನಗೆ ಫೇಸ್ಬುಕ್, ವಾಟ್ಸ್ಆಪ್ ಬಗ್ಗೆ ಏನೂ ಗೊತ್ತಿಲ್ಲ. ನಮ್ಮ ಸಂಬಂಧಿಕರು, ಹಿತೈಷಿಗಳು ಈ ಕುರಿತು ಕರೆ ಮಾಡಿ ಕೇಳುತ್ತಿದ್ದಾರೆ. ಇದರಿಂದ ನಾವು ಆಘಾತಕ್ಕೆ ಒಳಗಾಗಿದ್ದೇವೆ. ಈ ರೀತಿ ತಪ್ಪು ಸುದ್ದಿಗಳನ್ನು ಹಾಕುತ್ತಿರುವ ವಿಘ್ನ ಸಂತೋಷಿಗಳಿಗೆ ಇಂತಹ ಸುದ್ದಿಗಳನ್ನು ಹರಡಿಸದಂತೆ ಕೈಮುಗಿದು ಬೇಡಿಕೊಳ್ಳುತ್ತೇವೆ’ ಎಂದು ಹೇಳಿದರು.
ರೇಣುಕಸ್ವಾಮಿ ಬಳಸುತ್ತಿದ್ದ ಬೈಕ್ ರಿಪೇರಿ ಮಾಡಿಸಲೂ ನಮಗೆ ಸಾಧ್ಯವಾಗಿಲ್ಲ. ನಾವು ಹೊಸ ಕಾರು ಖರೀದಿಸಲು ಸಾಧ್ಯವೇ? ದಯವಿಟ್ಟು ನೋವಿನ ಮೇಲೆ ಮತ್ತೆ ಗಾಯ ಮಾಡಬೇಡಿ. ನಮ್ಮ ಸೊಸೆ, ಮೊಮ್ಮಗನ ಬದುಕು ಮುಂದೆ ಹೇಗೆ ಎಂಬ ಭಯ ನಮ್ಮನ್ನು ಕಾಡುತ್ತಿದೆ. ಸುಳ್ಳು ಸುದ್ದಿ ಹರಡುವುದನ್ನು ತಪ್ಪಿಸುದಕ್ಕಾಗಿ ಏನು ಮಾಡಬೇಕು ಎಂಬ ಬಗ್ಗೆ ನಾವು ಕಾನೂನು ತಜ್ಞರ ಜೊತೆ ಚರ್ಚಿಸುತ್ತೇವೆ’ ಎಂದರು.
ನಟ ದರ್ಶನ್ ಜಾಮೀನು ರದ್ದತಿ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಆರೋಪಿಗಳು ಅಪರಾಧ ಮಾಡಿರುವುದು ಸತ್ಯವಾಗಿರುವ ಕಾರಣದಿಂದಲೇ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಈ ಬಗ್ಗೆ ನಾವು ಮನವಿ ಮಾಡಿರಲಿಲ್ಲ, ಆದರೂ ಸರ್ಕಾರ ಸ್ವಯಂ ಪ್ರೇರಣೆಯಿಂದ ಕಾನೂನು ಪ್ರಕ್ರಿಯೆ ಮುಂದುವರಿಸಿರುವುದಕ್ಕೆ ನಾವು ಧನ್ಯವಾದ ಅರ್ಪಿಸುತ್ತೇವೆ’ಎಂದರು.