Saturday, June 20, 2026
Google search engine

Homeಸ್ಥಳೀಯಮೈಸೂರು ದಸರಾ-2026ರ ಮಹೋತ್ಸವಕ್ಕೆ ಮೊದಲ ಬಾರಿಗೆ ಕರಾವಳಿಯ ಕಂಬಳ ಕ್ರೀಡೆ ಆಯೋಜನೆಗೆ ನಿರ್ಧಾರ

ಮೈಸೂರು ದಸರಾ-2026ರ ಮಹೋತ್ಸವಕ್ಕೆ ಮೊದಲ ಬಾರಿಗೆ ಕರಾವಳಿಯ ಕಂಬಳ ಕ್ರೀಡೆ ಆಯೋಜನೆಗೆ ನಿರ್ಧಾರ

ಮೈಸೂರು :  ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ-2026 ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಸಾಂಪ್ರದಾಯಿಕ ಹಾಗೂ ಜನಪ್ರಿಯ ಕ್ರೀಡೆಯಾದ ಕಂಬಳವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಇಂದು ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ಕಂಬಳವನ್ನು ದಸರಾ ಉತ್ಸವದ ಭಾಗವಾಗಿಸುವ ಮೂಲಕ ರಾಜ್ಯದ ವಿವಿಧ ಭಾಗಗಳ ಸಾಂಸ್ಕೃತಿಕ ವೈಭವವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶ ಹೊಂದಲಾಗಿದೆ. ಕಂಬಳ ಆಯೋಜನೆಗೆ ಸಂಬಂಧಿಸಿದಂತೆ ಸೂಕ್ತ ಸ್ಥಳಗಳ ಪರಿಶೀಲನೆಯೂ ಸಭೆಯಲ್ಲಿ ನಡೆಯಿತು.

ಕಂಬಳ ಸ್ಪರ್ಧೆ ನಡೆಸಲು ಮೈಸೂರಿನ ವಿಜಯನಗರದಲ್ಲಿರುವ ಮುಡಾ ನಿವೇಶನ ಪ್ರದೇಶ, ಸಾತಗಳ್ಳಿ ಸಮೀಪದ 25 ಎಕರೆ ಜಾಗ ಹಾಗೂ ಐಶ್ವರ್ಯ ಪೆಟ್ರೋಲ್ ಬಂಕ್ ಸಮೀಪದ 25 ಎಕರೆ ಪ್ರದೇಶ ಸೇರಿದಂತೆ ಹಲವು ಸ್ಥಳಗಳನ್ನು ಪರಿಗಣಿಸಲಾಗಿದೆ. ಸಂಚಾರ ದಟ್ಟಣೆ, ವಾಹನ ನಿಲುಗಡೆ ವ್ಯವಸ್ಥೆ, ಸಾರ್ವಜನಿಕರ ಅನುಕೂಲ ಹಾಗೂ ಭದ್ರತಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮ ಸ್ಥಳವನ್ನು ಆಯ್ಕೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಕಂಬಳ ಸಮಿತಿ ಸದಸ್ಯರು ಸಹ ಸ್ಥಳಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಶೀಘ್ರದಲ್ಲೇ ಸ್ಥಳ ಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಲಕ್ಷ್ಮೀಕಾಂತ್ ರೆಡ್ಡಿ, “ದಸರಾ ಮಹೋತ್ಸವಕ್ಕೆ ಈ ಬಾರಿ ಹೊಸ ಆಕರ್ಷಣೆಯಾಗಿ ಕಂಬಳವನ್ನು ಸೇರಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಟ್ರಾಫಿಕ್ ನಿರ್ವಹಣೆ ಹಾಗೂ ಮೂಲಸೌಕರ್ಯ ವ್ಯವಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳ ಅಂತಿಮಗೊಳಿಸಲಾಗುವುದು” ಎಂದು ಹೇಳಿದರು.

ಕಂಬಳ ಸೇರ್ಪಡೆಯಿಂದ ದಸರಾ ಮಹೋತ್ಸವಕ್ಕೆ ಮತ್ತಷ್ಟು ಮೆರುಗು ಸಿಗಲಿದ್ದು, ಕರಾವಳಿ ಭಾಗದ ಸಾಂಸ್ಕೃತಿಕ ಕ್ರೀಡೆಯನ್ನು ಮೈಸೂರು ಜನತೆ ಹಾಗೂ ದೇಶ-ವಿದೇಶದ ಪ್ರವಾಸಿಗರು ನೇರವಾಗಿ ವೀಕ್ಷಿಸುವ ಅವಕಾಶ ದೊರೆಯಲಿದೆ. ದಸರಾ-2026ರ ಪ್ರಮುಖ ಆಕರ್ಷಣೆಗಳಲ್ಲಿ ಕಂಬಳವೂ ಒಂದಾಗುವ ನಿರೀಕ್ಷೆ ವ್ಯಕ್ತವಾಗಿದೆ.

RELATED ARTICLES
- Advertisment -
Google search engine

Most Popular