ಮೈಸೂರು: ಸಿಎಂ ಸಿದ್ದರಾಮಯ್ಯಗೆ ಸಚಿವರೊಬ್ಬರು 1 ಕೋಟಿ 90 ಲಕ್ಷ ರೂಪಾಯಿ ಬೆಲೆಬಾಳುವ ವಿದೇಶಿ ಸೋಫಾ ಸೆಟ್ ಗಿಫ್ಟ್ ಮಾಡಿದ್ದಾರೆ ಎಂದು ಇತ್ತೀಚೆಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಯವರು ಆರೋಪ ಮಾಡಿದ್ದರು. ಈ ಆರೋಪಕ್ಕೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ತಿರುಗೇಟು ನೀಡಿದ್ದು ಹೆಚ್ಡಿ ಕುಮಾರಸ್ವಾಮಿ ವಿರುದ್ದ ಮಾನ ನಷ್ಟ ಮೊಕದ್ದಮೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಕುಮಾರಸ್ವಾಮಿ ಈ ರೀತಿ ಲೋ ಲೆವೆಲ್ ರಾಜಕೀಯ ಮಾಡುತ್ತಾರೆ ಅಂದುಕೊಂಡಿರಲಿಲ್ಲ. ನಾನು ಸಿಎಂ ಜೊತೆ ಮಾತನಾಡಿದೆ ನಿಮ್ಮ ಬಳಿ ದಾಖಲೆ ಇದ್ದರೆ ತೋರಿಸಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಅವರು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಹೇಳಿಕೆಗೆ ಬೆಲೆ ಇರಬೇಕು, ನಂಬುವಂತಿದ್ದರೆ ಅವರಿಗೂ ಕ್ಷೇಮ. ಸಿಎಂ ಅವರಿಗೆ ಪ್ರಬಲವಾದ ಮಂತ್ರಿ ಗಿಫ್ಟ್ ನೀಡಿದ್ದಾರೆ ಅಂತಾ ಆರೋಪ ಮಾಡಿದ್ದಾರೆ. ಅದರ ಬೆಲೆ ಒಂದು ಕೋಟಿ 90 ಲಕ್ಷ ಅಂತಾ ಹೇಳಿದ್ದಾರೆ. ಸಿದ್ದರಾಮಯ್ಯ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಎರಡು ಸೋಪಾ ಸೆಟ್ ಸಿಎಂ ಅಧಿಕೃತ ಸಿಎಂ ನಿವಾಸಕ್ಕೆ ನೀಡಲಾಗಿದೆ. ಅದರ ಬೆಲೆ 72,250 ಹಾಗೂ 1,27,850 ರೂಪಾಯಿ. ಕುಮಾರಸ್ವಾಮಿ ಈ ರೀತಿ ಲೋ ಲೆವೆಲ್ ರಾಜಕೀಯ ಮಾಡುತ್ತಾರೆ ಅಂದುಕೊಂಡಿರಲಿಲ್ಲ.
ನಾನು ಸಿಎಂ ಜೊತೆ ಮಾತನಾಡಿದೆ ನಿಮ್ಮ ಬಳಿ ದಾಖಲೆ ಇದ್ದರೆ ತೋರಿಸಿ? ಸೋಫಾ ಏನು ಚಿನ್ನದ್ದಾ? ಅತಿ ಹೆಚ್ಚು ಬೆಲೆಯ ಸೋಫಾ 4 ಲಕ್ಷದ 68 ಸಾವಿರ ರೂಪಾಯಿ. ಕುಮಾರಸ್ವಾಮಿ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸಲು ಚಿಂತನೆ ನಡೆದಿದೆ ಎಂದು ಎಂ ಲಕ್ಷ್ಮಣ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಪ್ರಧಾನಿ ಅವರ ಸುಪುತ್ರ. ಎರಡು ಬಾರಿ ಸಿಎಂ ಆಗಿದ್ದವರು. ಅವರು ಜನರು ನಂಬುವ ರೀತಿ ಮಾತನಾಡಬೇಕು. ಇದನ್ನು ಹೇಳಿದರೆ ಕುಮಾರಸ್ವಾಮಿ ಅಂಧಾಭಿಮಾನಿಗಳಿಂದ ನನಗೆ ಬೆದರಿಕೆ ಬರುತ್ತಿದೆ. ಗ್ಯಾರಂಟಿ ವಿಚಾರವಾಗಿ ಐದು ರಾಜ್ಯಕ್ಕೆ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ನಿಮಗೆ ನಾಚಿಕೆ ಆಗುವುದಿಲ್ಲವಾ? ಯಾವ ಗ್ಯಾರಂಟಿ ಕೊಟ್ಟಿಲ್ಲ ಹೇಳಿ. ಕಾಂಗ್ರೆಸ್ ಪಕ್ಷ ಜೋಕರ್ ಅಂದುಕೊಂಡಿದ್ದೀರಾ? ಅಥವಾ ನಿಮ್ಮನ್ನು ಜೋಕರ್ ಅಂದುಕೊಂಡಿದ್ದೀರಾ? ಒಕ್ಕಲಿಗರನ್ನು ಗುತ್ತಿಗೆ ತೆಗೆದುಕೊಂಡಿದ್ದೀರಾ? ನಾನು ಒಕ್ಕಲಿಗ, ಡಿಕೆ ಶಿವಕುಮಾರ್ ಸಹಾ ಒಕ್ಕಲಿಗರು ಎಂದು ಕುಮಾರಸ್ವಾಮಿ ವಿರುದ್ದ ಎಂ ಲಕ್ಷ್ಮಣ ಆಕ್ರೋಶ ಹೊರ ಹಾಕಿದ್ದಾರೆ.
ಜೆಡಿಎಸ್ ಬರ ಅಧ್ಯಯನಕ್ಕೆ ಸ್ವಾಗತ. ಸ್ಥಳಕ್ಕೆ ಹೋಗಿ ಬರ ಪರಿಶೀಲನೆ ಮಾಡಿ. ಫೋಟೋ ಪೋಸ್ಗಾಗಿ ಅಧ್ಯಯನ ಮಾಡಬೇಡಿ. ಎಷ್ಟು ಸಮಸ್ಯೆಯಾಗಿದೆ ಎಷ್ಟು ನಷ್ಟವಾಗಿದೆ ಅಧ್ಯಯನ ಮಾಡಿ ವರದಿ ಕೊಡಿ. ಪಬ್ಲಿಸಿಟಿಗಾಗಿ ಬರ ಅಧ್ಯಯನ ಮಾಡಬೇಡಿ.
ಕಾಟಾಚಾರಕ್ಕೆ ಬರ ಅಧ್ಯಯನ ಮಾಡಬೇಡಿ. ಕೇಂದ್ರದಿಂದ ಇದುವರೆಗೂ ಒಂದು ಪೈಸೆ ಪರಿಹಾರ ಕೊಟ್ಟಿಲ್ಲ. 900 ಕೋಟಿ ರಾಜ್ಯದಿಂದ ಪರಿಹಾರ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ಪ್ರತ್ಯೇಕವಾಗಿ 900 ಕೋಟಿ ಹಣ ಇದೆ. ಜೆಡಿಎಸ್ ಬಿಜೆಪಿ ಅಂಗಭಾಗವಾಗಿದೆ. ಮಾಜಿ ಪ್ರಧಾನಿ ದೇವೇಗೌಡರ ಮೂಲಕ ಪ್ರಧಾನಿ ಮೋದಿಗೆ ಪತ್ರ ಬರೆಸಿ. ಬಿಜೆಪಿ ಜೆಡಿಎಸ್ಗೆ ಸುಪಾರಿ ಕೊಟ್ಟಿದೆ. ಕುಮಾರಸ್ವಾಮಿಯನ್ನು ವಿರೋಧ ಪಕ್ಷದ ನಾಯಕ ಮಾಡುತ್ತಾರೆ ಅನ್ನೋ ಮಾಹಿತಿ ಇದೆ. ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕ ಆಗುವುದು ವೆರಿಗುಡ್. ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕ ಆಗುವ ಯೋಗ್ಯತೆ ಇಲ್ಲ ಎಂದರು. ಇನ್ನು ಕುಮಾರಸ್ವಾಮಿ ಪೆನ್ ಡ್ರೈವ್ ಬಗ್ಗೆ ಲಕ್ಷ್ಮಣ ಪ್ರಶ್ನೆ ಮಾಡಿದ್ದಾರೆ. ಪೆನ್ ಡ್ರೈವ್ ಏನಾಯ್ತು ಸ್ವಾಮಿ ? ಇದು ನಮ್ಮ ರಾಜ್ಯದ ದುರಂತ ಎಂದು ಟೀಕಿಸಿದ್ದಾರೆ.